ಕನಸುಗಳನ್ನು ಕಾಣದವರು ಯಾರಾದರು ಈ ಭೂಮಿಯ ಮೇಲೆ ಇದ್ದಾರೆಯೇ? ಅರಿವು ಮೂಡಿದಂದಿನಿಂದ ಅರಿವಿಲ್ಲದ ಲೋಕಕ್ಕೆ ತೆರಳುವ ತನಕ ಕನಸುಗಳ ಕಟ್ಟಿ, ಕಟ್ಟಿದ ಕನಸುಗಳ ಬೆನ್ನಟ್ಟಿ -ಬೇಟೆಯಾಡುತ, ಕೈಗೂಡಿದರೆ ಹಿಗ್ಗುತ, ಕೈ ಜಾರಿದರೂ ಮುನ್ನುಗ್ಗುತ ಸಾಗುವುದೀ ಸ್ವಪ್ನಲೋಕದ ಪಯಣ. ಕನಸುಗಳು ಕೈಗೂಡದೆ ಬದುಕಲ್ಲಿ ಬೇಸರ ಮೂಡಿ ಆಶಾವಾದದ ಸೆಲೆ ಇಂಗಿ ಹೋದಾಗ, ಹೊಸ ಹೊಸ ಕನಸುಗಳು ನವ ಚೈತನ್ಯವ ಮೂಡಿಸಿ ಜೀವನೋತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತವೆ. ಬದುಕೆಂಬ ಕ್ಯಾನ್ವಾಸ್ ಮೇಲೆ ಬಣ್ಣಬಣ್ಣದ ಕನಸುಗಳು ಮೂಡಿಸುವ ಚಿತ್ತಾರಗಳು ಭವಿಷ್ಯದ ಬಗೆಗೆ ಉತ್ಸಾಹ ಮೂಡಿಸಿ, ತನ್ಮೂಲಕ ಬಾಳಿಗೆ ಒಂದು ಹೊಸ ಆಯಾಮ ಒದಗಿಸುವ ಟಾನಿಕ್ ಅಂದ್ರೂ ತಪ್ಪೇನಿಲ್ಲ.
ಕನಸುಗಳನ್ನು ನಾವು ನೀವೆಲ್ಲರೂ ಕಂಡಿರುತ್ತೇವೆ. ನಮ್ಮ ಸ್ಥಿತಿ- ಗತಿ, ಮನೋಗತಿ, ರುಚಿ-ಅಭಿರುಚಿ, ಆಸೆ-ಆಕಾಂಕ್ಷೆಗಳ ತಳಪಾಯದ ಮೇಲೆ ವಿವಿಧ ವಿನ್ಯಾಸಗಳ ಸ್ವಪ್ನ ಸೌಧದ ನಕಾಶೆ ಮನಸಲ್ಲಿ ಮೂಡಿರುತ್ತದೆ. ಹೀಗೆ ಕಂಡ ಕನಸಿನ ಸಾರ್ಥಕತೆ – ಔಚಿತ್ಯ ಅಡಗಿರುವುದು- ಕನಸನ್ನು ಕೈಗೂಡಿಸಿಕೊಳ್ಳುವಲ್ಲಿ ನಾವು ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎನ್ನುವುದರಲ್ಲಿ. ಬರೇ ಕನಸು ಕಂಡರಷ್ಟೇ ಸಾಲದು; ಅದು ನಮ್ಮ ಇತಿಮಿತಿಯ ಪರಿಧಿಯೊಳಗೆ ನಮ್ಮ ಪ್ರಯತ್ನದ ವ್ಯಾಪ್ತಿಯೊಳಗೆ ಫಲ ಕೊಡುವುದೇ ಎಂದು ಯೋಚಿಸಬೇಕಾದದ್ದು ತೀರಾ ಅಗತ್ಯ. ಒಂದೊಮ್ಮೆ ಅದು ನಮ್ಮ ನಿಲುಕಿಗೆ ಹೊರತಾದುದಾದರೂ..ನಮ್ಮ ಸಾಮರ್ಥ್ಯದ ಮೇರೆಗಳನ್ನು ಹಿಗ್ಗಿಸಿಕೊಂಡಾದರೂ ಕನಸನ್ನು ಕೈವಶ ಮಾಡಿಕೊಳ್ಳುವ ಹುಮ್ಮಸ್ಸು-ಛಲ ನಮ್ಮದಾಗಬೇಕು. ಆಗ ಮಾತ್ರ ಆಶಾಭಂಗವಾಗುವುದು ತಪ್ಪಿ, ಕನಸು ಮರೀಚಿಕೆಯಾಗದೆ ನಮ್ಮ ಜೀವನದ ಯಶಸ್ಸಿಗೆ ಮುನ್ನುಡಿ ಬರೆಯಬಲ್ಲುದು.
ಕನಸುಗಳಿಲ್ಲದ ಜೀವನ ರಸಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಂತೆ ಎನ್ನುವ ಮಾತಿದ್ದರೂ ಕೂಡಾ, ಸ್ವಪ್ನಸಾಮ್ರಾಜ್ಯದಲ್ಲೇ ವಿಹರಿಸುತ್ತಾ, ಜೀವನ ನಿಮಿತ್ತ ಕರ್ತವ್ಯಗಳನ್ನು ಕೂಡಾ ಮರೆತು, ಹಗಲುಗನಸುಗಳಲ್ಲಿ ಮೈಮರೆಯುವುದು ಸರಿಯಲ್ಲ. ಕನಸು ಸಾಕಾರಗೊಂಡಾಗ ದೊರಕುವ ಅಮಿತಾನಂದದ ನಿರೀಕ್ಷೆಯಲ್ಲೇ ನಮ್ಮ ಕರ್ತವ್ಯ ಪ್ರಜ್ಞೆ ಮರೆತು ಕುಳಿತರೆ ಬದುಕು ಹಳಿ ತಪ್ಪುವುದು ಖಂಡಿತ. ನಮ್ಮ ಕನಸುಗಳ ಬಗ್ಗೆ, ಸಾಧಿಸಬೇಕೆಂದುಕೊಂಡಿರುವುದರ ಬಗ್ಗೆ ಇಲ್ಲದ ಬಡಾಯಿಕೊಚ್ಚುವ ಬದಲು, ಎಲೆ ಮರೆಯ ಕಾಯಿಯಂತೆ ಇದ್ದು ನಮ್ಮ ಕನಸಿನ ಜೈತ ಯಾತ್ರೆ ಮುನ್ನಡೆಸಿದರೆ, ನಾವು ಬಯಸುವ ಮನ್ನಣೆ, ಪ್ರಸಿದ್ಧಿಗಳನ್ನೆಲ್ಲ ನಮ್ಮ ಸಾಧನೆಗಳ ಮೂಲಕ ಪಡೆದರೇನೆ ಸಮಂಜಸ ಅಲ್ಲವೇ?
ಕನಸುಗಳು ನಮ್ಮ ಸುಂದರ ಭವಿತವ್ಯದ ತಳಹದಿಗಳೇ ಆದರೂ, ನಮ್ಮ ಆಸೆ ಕೈಗೂಡದಾದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಎಲ್ಲಾ ಮುಗಿದೇಹೋಯಿತು ಎಂಬಂತಾಡುವುದು ಕೂಡ ಸರಿಯೆನಿಸಲಾರದು. ಸ್ವಪ್ನವು ವಾಸ್ತವವಾಗುವಲ್ಲಿ ನಮ್ಮ ಪ್ರಯತ್ನಗಳೆಷ್ಟೇ ಪರಿಪೂರ್ಣವಾಗಿದ್ದರೂ ಸಹಾ ಕೆಲವೊಮ್ಮೆ ಪ್ರತಿಕೂಲ ಸನ್ನಿವೇಶಗಳೋ ಅಥವಾ ಅದೃಷ್ಟವು ನಮ್ಮ ಪರವಾಗಿ ಇಲ್ಲದಿರುವುದರಿಂದಲೋ ಕನಸು ಮುರಿದುಬೀಳಬಹುದು; ತತ್ಪರಿಣಾಮವಾಗಿ ಕೀಳರಿಮೆ , ಹಿಂಜರಿಕೆ ಮನಸಲ್ಲಿ ಉದ್ಭವಿಸಿ ಖಿನ್ನತೆ ಆವರಿಸಲೂಬಹುದು. ಹೀಗಾಗದಂತೆ ಮನಸಿನ ಮೇಲೆ ಹತೋಟಿ ಸಾಧಿಸಿ ಕಡಿವಾಣ ಹಾಕಬೇಕಾದುದು ತೀರಾ ಅವಶ್ಯ. ಕನಸ್ಸಿನ ಸೌಧವೊಂದು ಕುಸಿದಾಗ ಅದಕ್ಕಾಗಿ ಪರಿತಪಿಸದೆ, ನಮ್ಮ ಪ್ರಯತ್ನ ಎಡವಿದ್ದೆಲ್ಲಿ ಎಂದು ಪರಾಮರ್ಶಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ನಮ್ಮ ಕನಸಿನ ಪಯಣದ ದಾರಿ ಸಾಗಬೇಕು. ಕನಸು ಕಾಣುವುದು, ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವುದು ಮಾತ್ರ ನಮ್ಮ ಕೆಲಸ; ಮಿಕ್ಕಿದ್ದೆಲ್ಲಾ ನಮ್ಮ ಅದೃಷ್ಟಕ್ಕೆ ಬಿಟ್ಟಿದ್ದು ಎಂಬ ನಿರಾತಂಕ- ನಿರ್ಲಿಪ್ತ ಮನಸ್ಥಿತಿ ನಮ್ಮದಾಗಿದ್ದಲ್ಲಿ ಖಿನ್ನತೆಯಿಂದ ವೃಥಾ ಬಳಲುವುದು ತಪ್ಪುತ್ತದೆ. ಅಲ್ಲದೆ ಹೊಸ ಕನಸು ಕಾಣಲು ಹುಮ್ಮಸ್ಸು ಮೂಡುತ್ತದೆ.
ಸುಮ್ಮನೆ ಅರ್ಥಹೀನ ಕನಸುಗಳನ್ನು ಕಟ್ಟಿ, ವ್ಯರ್ಥ ಆಸೆಗಳನ್ನುಇಟ್ಟುಕೊಂಡು ಗಗನ ಕುಸುಮವನ್ನು ಬಯಸುವುದಕ್ಕಿಂತ, ಕೈಗೆಟುಕುವ ಸ್ವಪ್ನಗಳನ್ನು ಕಟ್ಟಿ, ಬದುಕಿಗೆ ಸ್ಪಷ್ಟ ರೂಪು ಕೊಟ್ಟು, ಹಂತ ಹಂತವಾಗಿ ಮುನ್ನೆಡೆಯುವ ಹಾದಿ ಒಳಿತು. ಕನಸುಗಾರರಾಗುವ ಜೊತೆಗೇ, ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಬೇಕಾದ ತಾಳ್ಮೆ, ಪ್ರಯತ್ನಶೀಲತೆ,ದೃಢನಿಶ್ಚಯ, ಪ್ರಸಂಗಾವಧಾನತೆ ನಮ್ಮಲ್ಲಿರಬೇಕು. ನಮ್ಮ ಮಿತಿಗಳನ್ನೇ ನಮ್ಮ ಅವಕಾಶಗಳನ್ನಾಗಿಸಿಕೊಳ್ಳುವ ಚಾತುರ್ಯ, ಆಡಿಕೊಳ್ಳುವವರೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ನಮ್ಮ ಪರಿಮಿತಿಯೊಳಗೇ ಸಾಧಿಸಿ ತೋರಿಸಿದರೆ..ಗಗನ ಕುಸುಮವೂ ಧರೆಗಿಳಿದೀತು. ಜೀವನೋತ್ಸಾಹವ ತೊರೆದು ವಿರಾಗಿಯಂತೆ ಬಾಳುವುದರ ಬದಲು ಕನಸುಗಳ ರಂಗು ತುಂಬಿ ಜೀವನ ಸಾರ್ಥಕತೆಯತ್ತ ಮುಂದಡಿಯಿಡುವ ಧನಾತ್ಮಕ ಚಿಂತನೆ ಮತ್ತು ಆಶಾವಾದಿ ಮನಸ್ಸು ನಮ್ಮ-ನಿಮ್ಮೆಲ್ಲರದ್ದೂ ಆಗಲಿ ಎಂದು ಹಾರೈಸೋಣವೇ?

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...