ಮೊದಲಾರ್ಧ ಅರಮನೆ – ದ್ವಿತೀಯಾರ್ಧ ಟಾಕೀಸೇ ಸೆರೆಮನೆ

27 04 2008

 CAPÀUÀ¼ÀÄ 3

( 5 – CvÀÄåvÀÛªÀÄ , 4 – GvÀÛªÀÄ , 3 – ¸ÁzsÁgÀt, 2 PÀ¼À¥É , 1 wÃgÁ PÀ¼À¥É )

ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಚಿತ್ರ ನೋಡಿ ಬಂದ ಮೇಲೆ ಅದರಲ್ಲಿ ಅರ್ಧದಷ್ಟು ಮಾತ್ರ ತೃಪ್ತಿ ಸಿಕ್ಕ ಸಮಾಧಾನ - ಇನ್ನರ್ಧ ಅಸಮಾಧಾನ. ಹಾಗಂತ ಚಿತ್ರ ತೀರಾ ಕಳಪೆಯಾಗೇನೂ ಇಲ್ಲ. ಆದರೆ ಪ್ರಥಮಾರ್ಧ ನೋಡಿದ ಮೇಲೆ ಮನಸ್ಸಿನಲ್ಲಿರುವ ಖುಷಿ ಚಿತ್ರ ಮುಗಿದ ಮೇಲೆ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಮಧ್ಯಂತರದ ನಂತರದ ಎಳೆತವನ್ನು ಸಹಿಸುವ ತಾಳ್ಮೆ ಇದ್ದರೆ ಒಮ್ಮೆ ನೋಡಲು ಅಡ್ಡಿಯಿಲ್ಲ.

 

ಚಿತ್ರದ ಹೆಸರೇ ಹೇಳುವಂತೆ ಅದೊಂದು ಅರಮನೆಯಂತಹ ಮನೆಯ ಸುತ್ತ ಹೆಣೆದ ಕಥೆ. ಇಡೀ ಅರಮನೆಯಲ್ಲಿ ಇರೋದು ಅರಮನೆಯ ರಾಜ  ರಾಜಶೇಖರ್ ಅರಸ್(ಅನಂತ್ ನಾಗ್) ಮತ್ತು ಅವರ ಸೇವಕ ಬಸಯ್ಯ(ಕರಿಬಸವಯ್ಯ). ಗತಿಸಿ ಹೋದ ಹೆಂಡತಿಯ ನೆನಪಲ್ಲೇ ಕೊರಗುತ್ತಾ, ಮೂರು ಹೊತ್ತೂ ಮದಿರೆಯ ಮತ್ತಲ್ಲೇ ತೇಲುತ್ತಾ ಇರುವ ಅರಸ. ಅಲ್ಲಿಗೆ ಫೋಟೋ ತೆಗೆಯೋಕೆ ಬರೋದು ಅರುಣ ಅನ್ನೋ ಹೆಸರಿನ ಗಣೇಶ. ತಾತ.. ತಾತ.. ಅಂತ ಕರೆಯುವ, ಚಿನುಕುರುಳಿಯಂತೆ ಮಾತಾಡುತ್ತ ಕತ್ತಲೆ ತುಂಬಿದ ಅರಮನೆಗೆ ಅರುಣನಿಂದ ನವ ಅರುಣೋದಯ. ತಮ್ಮ ಎಂದಿನ ಲವಲವಿಕೆಯಿಂದ ಪಂಚಿಂಗ್ ಮಾತುಗಳಿಂದ ಅರಸ್‌ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅರುಣ ಇಷ್ಟವಾಗುತ್ತಾನೆ. ತಾತನ ನೋವಿಗೆ ಕಿವಿಯಾಗುತ್ತಾನೆ. ನಗು ನಗು ಅಂತ ನಗೆಯ ಮಂತ್ರ ಹೇಳುತ್ತಾ ಚಾರ್ಲಿ ಚಾಪ್ಲಿನ್ , ರಾಜ್ ಕಪೂರ್ ಏನೆಲ್ಲಾ ಆಗಿ ಬಿಡುತ್ತಾನೆ.

 

ಮರಣಶಯ್ಯೆಯಲ್ಲಿದ್ದ ಪತ್ನಿಯ ಮಾತಿನಂತೆ ಮದುವೆಯಾಗಲು ಹೊರಟ ಅರಸ್ ಮಕ್ಕಳೆಲ್ಲಾ ಇದೇ ಕಾರಣಕ್ಕೆ ದೂರಾಗಿ…ಅರಮನೆಯಲ್ಲಿ ಅರಸ್ ಏಕಾಂಗಿ. ಅವರನ್ನೆಲ್ಲಾ ಅರಮನೆಯಲ್ಲಿ ಒಂದಾಗಿಸಿ ಫ್ಯಾಮಿಲಿ ಫೋಟೋ ತೆಗೆಯಬೇಕೆನ್ನೋ ತಾತನ ಆಸೆಗೆ ಅರುಣ ಒತ್ತಾಸೆಯಾಗುತ್ತಾನೆ..ಭರವಸೆ ತುಂಬುತ್ತಾನೆ. ಈ ಭರವಸೆ ಈಡೇರಿಸಲು ಅರುಣನ ಹುಡುಕಾಟ, ನಡು-ನಡುವಲ್ಲಿ ಸ್ವಲ್ಪ ಹುಡುಗಾಟ, ಅರಸ್ ಹಿರೀ ಮಗಳು ಭಾವೀ ಡಾಕ್ಟರ್ ಜೊತೆ ಅಲೆದಾಟ-ಚೆಲ್ಲಾಟ, ಆಕೆ ಬೇರೆಯವನ ಪ್ರೇಮದಲ್ಲಿ ಮುಳುಗಿದವಳೆಂದು ತಿಳಿದಾಗ ಪರದಾಟ, ಆಮೇಲೆಲ್ಲಾ ಬರೀ ದೊಂಬರಾಟ !! ಇದಿಷ್ಟು ಚಿತ್ರದಲ್ಲಿರೋ ಕಥೆಯ ಇಣುಕು ನೋಟ. ಮುಂದೆ……??

 

ಅಭಿನಯದ ವಿಷಯಕ್ಕೆ ಬಂದ್ರೆ ಗಣೇಶ್, ಅನಂತ್ ನಾಗ್‌ಗೆ ಪರಸ್ಪರ ಜಿದ್ದಾಜಿದ್ದಿ ಸ್ಪರ್ಧೆಗೆ ಬಿದ್ದವರಂತೆ ಅಭಿನಯಿಸಿ ಸೈ ಅನ್ನಿಸಿಕೊಂಡರೆ, ರೋಮಾ ಅಭಿನಯ ಅಷ್ಟೇನೂ ರೋಮಾಂಚಕಾರಿಯಾಗಿಲ್ಲ. ಕರಿಬಸವಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದರೆ, ತಾರಾ, ಅವಿನಾಶ್‌ಗೆ ಹೆಚ್ಚು ಸ್ಕೋಪ್ ಇರ್ಲಿಲ್ಲ. ಚಿತ್ರದ ಮೊದಲಾರ್ಧದ ಯಶಸ್ಸಿನ ಸಿಂಹಪಾಲು ತುಷಾರ್ ರಂಗನಾಥ್ ಸಂಭಾಷಣೆಗೆ ಸಲ್ಲುತ್ತದೆ; ಕೆಲವು ಡೈಲಾಗುಗಳು ಪಂಚ್‌ನಿಂದಾಗಿ ಮನಸ್ಸಲ್ಲಿ ನಿಲ್ಲುತ್ತವೆ. ಕವಿರಾಜ್ ಬರೆದ ಕವಿತೆಯಂತಹ ಹಾಡು ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ…ಚಿತ್ರ ಮುಗಿಸಿ ಬಂದ ಮೇಲೂ ಮನಸ್ಸಿನಲ್ಲಿ ಉಳಿಯುತ್ತದೆ. ನಗೆ ನಗೆ ಹಾಡು ಕೂಡಾ ಪರವಾಗಿಲ್ಲ. ಕೊಲ್ಲೇ ನನ್ನನ್ನು.. ಹಾಡಲ್ಲಿ ಹಾಡುಗಾರ-ಸಂಗೀತಗಾರ ಗುರುಕಿರಣ್ ಇಷ್ಟವಾಗುತ್ತಾರೆ. ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? ಮೊದಲನೆಯದಾಗಿ ಗಟ್ಟಿ ಚಿತ್ರ ಕಥೆ ಆಯ್ಕೆ ಮಾಡದೆ ಇರುವಲ್ಲಿ. ಎರಡನೆಯದಾಗಿ ಭಾವನಾತ್ಮಕ ಸನ್ನಿವೇಶಗಳು ತೀರಾ ಪ್ರೇಕ್ಷಕರ ಸಹನೆ ಮೀರುವಷ್ಟು ಎಳೆದಾಡಿರುವಲ್ಲಿ. ಅಲ್ಲದೆ ದ್ವಿತೀಯಾರ್ಧದ ಕಥೆಯ ಜಾಡು ಮಾಮೂಲಿಯಾಗಿದ್ದು ಎಲ್ಲರೂ ಊಹಿಸಿದಂತೆ ನಡೆಯುವುದು ಕೂಡಾ ಚಿತ್ರವನ್ನು ಸಾಮಾನ್ಯವಾಗಿಸಿದೆ ಅಂತ ನನ್ನ ಅನಿಸಿಕೆ. ಡೈಲಾಗು, ಹಾಡು ಎಷ್ಟೇ ಚೆನ್ನಾಗಿದ್ರೂ ಕೂಡಾ ಗಟ್ಟಿ ಕಥೆಯ ತಳಪಾಯ ಇದ್ದರೆ ಮಾತ್ರ ಅರಮನೆ ಕಟ್ಟಬಹುದೇ ಹೊರತು ಮಾತಿನಲ್ಲೇ ಮನೆ ಕಟ್ಟೋಕಾಗುತ್ತಾ ಹೇಳಿ?

 

ಒಟ್ಟಾರೆಯಾಗಿ ನಾಗಶೇಖರ್ ಪ್ರಥಮ ನಿರ್ದೇಶನದ ಚಿತ್ರ ಸಾಕಷ್ಟು ನ್ಯೂನ್ಯತೆಯ ಹೊರತಾಗಿಯೂ ಉತ್ತಮ ಪ್ರಯತ್ನ ಅಂತ ಹೇಳಲಡ್ಡಿಯಿಲ್ಲ. ಗಣೇಶ್, ಅನಂತ್ ಅಭಿನಯ ನೋಡೋಕೆ, ಗುರುಕಿರಣ್ ಸಂಗೀತ, ಕವಿರಾಜ್, ಕಾಯ್ಕಿಣಿ ಪದಗಳ ಮಾಧುರ್ಯ ಸವಿಯೋಕೆ ಅಂತ ಟೈಂಪಾಸ್ಗಾಗಿ ಒಂದ್ಸಲ ನೋಡಬಹುದು. ಆದ್ರೆ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಬಗ್ಗೆ ಇಲ್ಲದ ನಿರೀಕ್ಷೆ ಮಾತ್ರ ಇಟ್ಕೋಬೇಡಿ ಅನ್ನೋ ಎಚ್ಚರಿಕೆಯನ್ನು ಮಾತ್ರ ಮರೆಯಬೇಡಿ.

                                                           - ವಿಜಯ್ ರಾಜ್ ಕನ್ನಂತ್


Actions

Information

4 responses

28 04 2008
chetana thirthahalli

ಅರಮನೆ ಬಗ್ಗೆ ಅನಿಸಿಕೆಗಳನ್ನು ಬೇರೆ ಬೇರೆ ಬ್ಲಾಗುಗಳಲ್ಲಿ ಓದುತ್ತ ಬಂದೆ. ಸೆಕೆಂಡ್ ಹಾಫ್ ಬಗ್ಗೆ ನೀವು ನೀಡಿದ ಎಚ್ಚರಿಕೆ ಪಾಲಿಸುತ್ತ ಮೋವಿ ನೋಡಬೇಕೆಂದು ಡಿಸೈಡ್ ಮಾಡಿರುವೆ.
ಥ್ಯಾಂಕ್ಸ್!

- ಚೇತನಾ

28 04 2008
ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? « Magic Carpet

[...] ರಿಲೀಸ್ ಆಗಿದೆ. ಮನಸಿನ ಮರ್ಮರ…ಬ್ಲಾಗ್ನ ವಿಜಯ್ ಕುಮಾರ್ ಕನ್ನಂತ್ ಅವರು [...]

30 04 2008
Tina

ವಿಜಯ್ ಅವ್ರೆ,
ನಿಮ್ಮ ಲೇಖನದ ಶೀರ್ಷಿಕೆ ಓದೇ ಚೆನ್ನಾಗಿ ನಗು ಬಂತು. ಇನ್ನೂ ಮೂವೀ ನೋಡಿಲ್ಲ, ಆದ್ರೆ ನಿಂ ಮಾತು ಓದಾದ ಮೇಲೆ ಚಲನಚಿತ್ರ ನೋಡಲಿಕ್ಕೆ ಹೋಗೋವಾಗ ಒಂದು ಚಿಟಿಕೆ ಉಪ್ಪನ್ನ ಜತೆಗೆ ಒಯ್ದರೆ ಒಳಿತು ಅನ್ನಿಸ್ತು. ನಿಮ್ಮ ರೆವ್ಯೂ ಹದವಾಗಿದೆ. ಏನೆ ಆಗಲಿ, ಚಿತ್ರದ ಕೊರತೆಗಳನ್ನ ಸೂಚಿಸ್ತಲೆ ನಾಗಶೇಖರರ ಮೊದಲನೆ ಪ್ರಯತ್ನಕ್ಕೆ ನೀವು ಶಭಾಸ್ ಎಂದಿರುವುದು ಖುಶಿ ಕೊಟ್ಟಿತು.
-ಟೀನಾ.

6 05 2008
K

Hello,

I watched the movie on second day. I liked it very much. I’m planning to watch it again. The film is really good. Dialogues are simple yet great. It touches our heart directly. A nodable film.

Leave a comment