ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು.
ಕಥೆ ಏನಪ್ಪಾ ಅಂದ್ರೆ …
“ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ ಒಂಬತ್ ಆನಿ ಹೋಯಿ, ಮರಿಯಾನಿ ಬಾಲ ಸಿಕ್ಕಂಡ್ ಬಿದ್ದಿತ್ತ್ ಅಂದ ಅಂಬ್ರ್”
ಇದು ಸುಳ್ಳು ಹೇಳುವುದರ ಪರಮಾವಧಿಯನ್ನು ಸೂಚಿಸುವ ಒಂದು ನುಡಿಕಟ್ಟು ಅಥವಾ ಕಟ್ಟು ಕಥೆ ಅನ್ನಬಹುದು. ಇದರ ಅರ್ಥ ಇಷ್ಟೇ.. ಸುಕ್ರ ಅನ್ನುವ ಒಬ್ಬ ಮಹಾ ಸುಳ್ಳುಗಾರನ ಹತ್ರ ಹೋಗಿ ಸುಳ್ಳು ಹೇಳಪ್ಪಾ ಅಂತ ಅಂದ್ರೆ.. ‘ವಾಟೆ ಅಂಡೆ’ಯ ( ಒಲೆ ಊದಲು ಬಳಸುವ ಬಿದಿರಿನ ಕೊಳವೆ… ಲೋಹದ ಕೊಳವೆ ಅಂತ ಬೇಕಾದ್ರೂ ಇಟ್ಟುಕೊಳ್ಳಬಹುದು) ಒಳಗೆ ಒಂಬತ್ತು ಆನೆಗಳು ತೂರಿ ಹೋಗಿ, ಮರಿಯಾನೆ ತೂರಿ ಹೋಗುವಾಗ ಅದರ ಬಾಲ ಸಿಕ್ಕಿ ಹಾಕಿಕೊಂಡಿತ್ತು ಅಂತಾ ಹೇಳಿದನಂತೆ. ಇಲ್ಲಿ ಸುಕ್ರನ ಸುಳ್ಳಿನ ಪವರ್ ಎಷ್ಟಿದೆ ಅಂದ್ರೆ.. ವಾಟೆ ಅಂಡೆಯ ಒಳಗೆ ಆನೆ ತೂರಿ ಹೋಗುವುದೇ ಅಸಾಧ್ಯ ಪರಿಕಲ್ಪನೆ. ಅಂಥಾದ್ರಲ್ಲಿ ಒಂಬತ್ತು ಆನೆ ಸಲೀಸಾಗಿ ತೂರಿ ಹೋಗಿ, ಗಾತ್ರದಲ್ಲಿ ಚಿಕ್ಕದಾದ ಮರಿ ಆನೆ ತೂರಿ ಹೋಗೋವಾಗ ಅದರ ಬಾಲ ಸಿಕ್ಕಿಹಾಕಿಕೋಡಿತು… ಅಂತ ಬುರುಡೆ ಬಿಡ್ತಾನೆ.
ಗುರು ಕಿರಣ್ ಅವರ “ಬಂಡಲ್ ಬಡಾಯಿ ಮಾದೇವ…”ನೂ ಸುಕ್ರನಿಂದ ಸ್ಫೂರ್ತಿ ಪಡೆದಿದ್ದಾನೆ ಅನ್ನೋದು ಶುದ್ದ ಶುಂಠಿ.
ನಿಮ್ಮಲ್ಲೂ ಇಂಥಹ ಕಥೆಗಳಿವೆಯೆ…ಇದ್ರೆ ಹಂಚಿಕೊಳ್ಳಿ. ಎಲ್ಲಾರು ಓದಿ ಖುಷಿ ಪಡೋಣ.

bhari laikitt kati
ಹ್ಹ ಹ್ಹ ಹ್ಹ…!! ಮಜವಾಗಿದೆ ವಾಟೆ ಅಂಡೆಯೊಳಗೆ ಆನೆಗಳು ತೂರಿದ ಕತೆ!! ಎಲ್ಲಿಯೂ ಕೇಳಿರಲಿಲ್ಲ!!
ಅದೇ ರೀತಿ, ನನ್ನೂರಾದ ಶೃಂಗೇರಿಯ ಸಮೀಪದಲ್ಲಿ ಇದೆ ಬಗೆಯ ಒಬ್ಬ ಮಹಾನ್ ಸುಳ್ಳುಗಾರನಿದ್ದಾನೆ! ಅವನ ಸುಳ್ಳಿನ ಕಂತೆಗಳಲ್ಲಿ ಒಂದು ಹೀಗಿದೆ:
“ಮನ್ನೆ ಮಾರಾಯ, ಸೌದೆ ಕಡೀಕೆ ಅಂತಾ ಕಾಡಿಗೆ ಹೋಗಿದ್ದೆ, ಒಂದ್ ಸ್ವಲ್ಪ ಕಟ್ಟಿಗೆ ಕಡದು, ಎಲೆ ಹಾಕುಣ ಅಂತ, ಕತ್ತೀನ ಒಂದು ಮರಕ್ಕೆ ಹೊಡದು, ಅದ್ರ ಬೇರ್ ಮೇಲೆ ಕೂತೆ. ಎಲೆ ಹಾಕಿ ಯಾಕೊ ನೋಡ್ತೀನಿ, ಮನೆ ಬುಡಕ್ಕೆ ಬಂದಾಗಿತ್ತು!! ನೋಡಿದ್ರೆ, ನಾನ್ ಕೂತಿದ್ದು ಬೇರ್ ಅಲ್ಲ ಮರಾಯಾ, ಹೆಬ್ಬಾವು!!”
(ಇಲ್ಲಿ, ಎಲೆ = ಎಲೆ ಅಡಿಕೆ ಹಾಗು ತಂಬಾಕು)