ನಾನು ಚಿಕ್ಕವನಿದ್ದಾಗ ಕೇಳಿದ ಒಂದು ಪದ್ಯ ಇದು. ಇದು ಬಾಯಿಂದ ಬಾಯಿಗೆ ಹರಿದು ಬರುವಾಗ ಇದರ ರೂಪದಲ್ಲಿ ಅನೇಕ ಬದಲಾವಣೆಗಳಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕೆರಳಿಸುವ, ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುವ ಈ ಪದ್ಯ ಯಾರು ಸೃಷ್ಟಿಸಿದ್ದೋ ಗೊತ್ತಿಲ್ಲ. ನನಗೆ ಚಿಕ್ಕಂದಿನಲ್ಲಿ ಕೇಳಿದ್ದು ಇನ್ನೂ ಬಾಯಿಪಾಠ ಇದೆ.
ಈ ಪದ್ಯದಲ್ಲಿ ಸಿಂಡಿಕೇಟ್ ಬ್ಯಾಂಕು ಬರುತ್ತೆ. ಅದ್ಯಾವುದೋ ಕಮಲಾ ಸರ್ಕಸ್ ಅನ್ನೋ ಸರ್ಕಸ್ ಬರುತ್ತೆ. ಹಾಗೆಯೇ ಬಡ್ಡಿ ಕಮಲ ಅನ್ನೋ ಹೆಂಗಸಿನ ಪ್ರಸ್ತಾಪವೂ ಬರುತ್ತೆ. ಯಾರೀಕೆ ಕಮಲ? ಆಕೆ ಬಡ್ಡಿ ವ್ಯವಹಾರ ಮಾಡ್ತಾ ಇದ್ದಳಾ? ಯಾವೂರಿನವಳು? ಅದ್ಯಾವುದು ಕಮಲಾ ಸರ್ಕಸ್? ಅದು ಈಗಲೂ ಇದ್ಯಾ? ಈ ಹಾಡು ರಚಿತವಾದ ಕಾಲ ಯಾವುದಿರಬಹುದು? ಯಾರಿದನ್ನು ಬರೆದಿರಬಹುದು..ಇದು ಜನರ ಬಾಯಿಂದ ಬಾಯಿಗೆ ಹೀಗೆ ಹರಿದು ಬಂತೆ..? ಹೀಗೆ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಬಹುಶಃ ನಮ್ಮೂರು ಕುಂದಾಪ್ರ-ಉಡುಪಿ ಕಡೆಯ ಪದ್ಯ ಇರಬೇಕು ಅನ್ನೋದು ನನ್ನ ಊಹೆ. ಕೊನೆಯಲ್ಲಿ ದೇಶಪ್ರೇಮದ ಒಂದು ಝಲಕ್ ಕೂಡಾ ಇದೆ. ನಿಮಗೇನಾದ್ರೂ ಈ ಕುರಿತು ಗೊತ್ತಿದ್ರೆ ಹೇಳಿ…ಇಲ್ಲವಾದ್ರೂ ಹಾಡನ್ನಂತೂ ಓದಿ ಖುಶಿ ಪಡಲು ಅಡ್ಡಿಯಿಲ್ಲ.
ಮಗು ಮಗು ಪಾಠ ಕಲಿ..
ಯಾವ ಪಾಠ?
ಕೃಷ್ಣ ಪಾಠ
ಯಾವ ಕೃಷ್ಣ?
ಬಾಲ ಕೃಷ್ಣ
ಯಾವ ಬಾಲ?
ಕುದುರೆ ಬಾಲ
ಯಾವ ಕುದುರೆ?
ಸರ್ಕಸ್ ಕುದುರೆ
ಯಾವ ಸರ್ಕಸ್?
ಕಮಲಾ ಸರ್ಕಸ್
ಯಾವ ಕಮಲಾ?
ಬಡ್ಡಿ ಕಮಲ
ಯಾವ ಬಡ್ಡಿ?
ಬ್ಯಾಂಕಿನ ಬಡ್ಡಿ
ಯಾವ ಬ್ಯಾಂಕು?
ಸಿಂಡಿಕೇಟ್ ಬ್ಯಾಂಕು
ಯಾವ ಸಿಂಡಿ?
ಭಟ್ಟರ ಸಿಂಡಿ
ಯಾವ ಭಟ್ಟರು?
ಪೂಜೆ ಭಟ್ಟರು
ಯಾವ ಪೂಜೆ?
ಗಣಪನ ಪೂಜೆ
ಯಾವ ಗಣಪ?
ಸೊಂಡಿಲ ಗಣಪ
ಯಾವ ಸೊಂಡಿಲು?
ಆನೆ ಸೊಂಡಿಲು
ಯಾವ ಆನೆ?
ಕಾಡು ಆನೆ
ಯಾವ ಕಾಡು?
ನಮ್ಮ ಕಾಡು
ಯಾವ ನಮ್ಮ?
ನಮ್ಮ ದೇಶ ನಮ್ಮ
ಯಾವ ದೇಶ?
ಭಾರತ ದೇಶ
ಯಾವ ಭಾರತ?
ನಮ್ಮ ಭಾರತ

namaskaara maharrire…
naanu senthigippnge e padya helthiddi…
eeega ill sikth…
nagu banthu.. neevu heldange vichitra padyane..