ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ಮೊದಲೆಂಬುದಿಲ್ಲ. ನಾವು ನಂಬಿದ್ದೇ ಸರಿ ಅನ್ನುವ ಎರಡೂ ಪಂಗಡದವರ ಸಂಖ್ಯೆಗಿಂತಲೂ ಯಾವುದು ಸರಿ ಅನ್ನೋ ಗೊಂದಲದಲ್ಲಿರುವವರೇ ಜಾಸ್ತಿ. ನಾವು ಹುಟ್ಟಿ ಬೆಳೆದ ಪರಿಸರ, ನಮ್ಮ ಹಿರಿಯರ ನಂಬಿಕೆಗಳ ಫಲವಾಗಿ ಮೂಡಿದ ದೇವರ ಕುರಿತು ನಮ್ಮ ಅಭಿಪ್ರಾಯ, ನಂಬಿಕೆಗಳು ಕಾಲಕಳೆದಂತೆಲ್ಲಾ ನಮ್ಮ ಅರಿವು, ಚಿಂತನೆಯು ವ್ಯಾಪ್ತಿ ವಿಸ್ತರಿಸಿದೆಂತೆಲ್ಲಾ ಬದಲಾಗಬಹುದು. ದೇವರ ಕುರಿತು ನನ್ನ ಚಿಂತನೆಗೆ ಒಂದು ರೂಪು ಕೊಟ್ಟ ಪುಸ್ತಕ ಮೂರ್ತಿರಾಯರು ಬರೆದ ‘ದೇವರು’. ದೇವರ ಕುರಿತಾದ ಈ ಜಿಜ್ಞಾಸೆಗಳ ಸಾಲಿಗೆ ಹೊಸದಾಗಿ ಒಂದು ಪುಸ್ತಕ ಸೇರ್ಪಡೆಯಾಗಿದೆ. ಅದುವೇ ಶಾಂತಾರಾಮ ಸೋಮಯಾಜಿಯವರು ಬರೆದ ‘ದೇವರೆಂಬ ಸುಳ್ಳು ಮತ್ತು ಧರ್ಮವೆಂಬ ದ್ವೇಷ’.
ದೇವರಿದ್ದಾನಾ, ಇದ್ದರೆ ಎಲ್ಲಿದ್ದಾನೆ, ಅವನ ಗುಣಲಕ್ಷಣಗಳೇನು, ಆತನ ಆಕಾರ ರೂಪ ಹೇಗೆ, ಆತ ಏನು ಮಾಡುತ್ತಿದ್ದಾನೆ, ಆತನೆಲ್ಲಿಂದ ಬಂದ, ಹೇಗೆ ಬಂದ, ಅವನಿರುವ ಸ್ಥಳ ಸೃಷ್ಟಿ ಆದದ್ದು ಹೇಗೆ, ಆತನನ್ನು ಪರಿಗಣಿಸದಿದ್ದರೆ ಏನಾಗುತ್ತದೆ, ಆತನನ್ನು ಕಾಣುವುದು ಹೇಗೆ, ಆತ ನಮಗೇನು ಮಾಡುತ್ತಾನೆ…ಹೀಗೆ ದೇವರ ಕುರಿತಾದ ಪ್ರಶ್ನೆಗಳನ್ನೆಲ್ಲಾ ಒಂದೊಂದಾಗಿ ಎತ್ತಿಕೊಂಡು ತರ್ಕಬದ್ಧವಾಗಿ ವಿಶ್ಲೇಷಿಸುತ್ತಾ ಹೋಗುತ್ತದೆ ಈ ಕೃತಿ. ಅನೇಕ ಕಥೆ, ಉಪಕಥೆ, ಝೆನ್ ಕಥೆ, ಉದಾಹರಣೆಗಳ ಸಹಿತ ಇವರು ಮಂಡಿಸುವ ತರ್ಕ ನಮ್ಮನ್ನು ಈ ಕುರಿತು ಚಿಂತನೆಗೆ ಹಚ್ಚುತ್ತದೆ.
ನಮ್ಮಿಂದಲೇ ಸೃಷ್ಟಿಯಾದ ದೇವರು ಅನ್ನೋ ಕಲ್ಪನೆ ಹೇಗೆ ಬೆಳೆದುಬಂದು ತನ್ನ ಸುತ್ತ ಮುತ್ತ ಸೃಷ್ಟಿಸಿಕೊಂಡ ನಿಗೂಢತೆಯ, ಜೊತೆಗೆ ಭೀತಿ ಹುಟ್ಟಿಸುವ ಪರಿಕಲ್ಪನೆಯಾಯ್ತು ಅನ್ನುವುದನ್ನು ಶಾಂತಾರಾಮ ಸೋಮಯಾಜಿಗಳು ತಮ್ಮ ವಿಚಾರಸರಣಿಯ ಮೂಲಕ ತೆರೆದಿಡುತ್ತಾ ಹೋಗುತ್ತಾರೆ. ಜೊತೆಗೆ ದೇವರ ಕುರಿತು ಇರುವ ಬಿರುದು ಬಾವಲಿಗಳಾದ ಸರ್ವಶಕ್ತ,ಅಮರ.. ಇವುಗಳನ್ನೆಲ್ಲಾ ಒಂದೊಂದಾಗಿ ಹೇಗೆ ಸುಳ್ಳು ಅನ್ನುವುದನ್ನು ಪದರಪದರವಾಗಿ ಬಿಡಿಸಿಡುತ್ತಾ ಕೊನೆಗೆ ಈ ಎಲ್ಲಾ ಸುಳ್ಳುಗಳ ಮೊತ್ತವಾದ ‘ದೇವರು’ ಅನ್ನುವ ಕಲ್ಪನೆ ಹೇಗೆ ಸುಳ್ಳು ಅನ್ನುವುದನ್ನು ಪ್ರೂವ್ ಮಾಡುವ ಪರಿ ಸೊಗಸಾಗಿದೆ. ಅಲ್ಲದೆ ಮಾನವನ ಬದುಕಿನಲ್ಲಿ ಪ್ರೀತಿ ಕರುಣೆ ತುಂಬಬೇಕಾದ ಧರ್ಮವೆನ್ನುವುದು ಹೇಗೆ ದ್ವೇಷದ ಬೀಜ ಬಿತ್ತುತ್ತದೆ ಅನ್ನುವುದನ್ನೂ ನಿರೂಪಿಸುವ ಈ ಪುಸ್ತಕವನ್ನು ತೆರೆದ ಮನಸ್ಸಿನಿಂದ, ಯಾವ ಪೂರ್ವಾಗ್ರಹಗಳೂ ಇಲ್ಲದೆ ಒಮ್ಮೆ ಓದಿ ನೋಡಿ.
ಪುಸ್ತಕ : ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ
ಲೇಖಕರು : ಶಾಂತಾರಾಮ ಸೋಮಯಾಜಿ
ಪ್ರಕಾಶಕರು : ನವ ಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆದ್
ಪುಟಗಳು : 120
ಬೆಲೆ : 65 ರೂಪಾಯಿಗಳು

Hello Sir,
I want that book ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ where can I get it.