ಈ ಪ್ರಸಂಗ ಹೇಳಿದವರು ನನಗೆ ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಎಂ.ವಿ.ಹೆಗಡೆ. ಅವರು ಮೂಲತಃ ಉತ್ತರಕನ್ನಡದವರು. ಆರಂಭದಲ್ಲಿ ಪ್ರಾಥಮಿಕ ಶಾಲೆಗೆ ಮೇಷ್ಟ್ರಾಗಿ ಬಂದ ಅವರಿಗೆ ಕುಂದಾಪುರ ಕನ್ನಡದ ಪರಿಚಯವೇ ಇರಲಿಲ್ಲ. ಸಿದ್ದಾಪುರ(ಉಡುಪಿ ಜಿಲ್ಲೆ)ದಲ್ಲಿ ಅವರ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯ ಆರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಮಗೊಮ್ಮೆ ಕ್ಲಾಸಿನಲ್ಲಿ ಅವರು ಹೇಳಿದ್ರು. ಅದನ್ನೇ ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ.
ಸಿದ್ದಾಪುರದ ಶಾಲೆಗೆ ಮೇಷ್ಟ್ರಾಗಿ ಬಂದ ಹೊಸದು. ಯಾವುದೋ ತರಗತಿಯೊಂದರಲ್ಲಿ ಪಾಠ ಮಾಡುತ್ತಾ ಇದ್ರು. ಪಾಠ ಮುಗಿಯುವುದಕ್ಕೊ ಶಾಲೆಯ ‘ಲಾಂಗ್ ಬೆಲ್’ ಹೊಡೆಯುವುದಕ್ಕೊ ಸರಿಹೋಗಿತ್ತು. ಈಗಷ್ಟೇ ಮಾಡಿದ ಪಾಠ ಮಕ್ಕಳ ತಲೆಗೆ ಎಷ್ಟು ಹೋಗಿದೆ ನೋಡೋಣ ಅಂತ ಅವ್ರು ಮಕ್ಕಳಿಗೆ ಪಾಠದ ಕೊನೆಯಲ್ಲಿರುವ ಪ್ರಶ್ನೆಗೆ ನಾಳೆ ಉತ್ತರ ಹೇಳಬೇಕು ಅಂತ ಮಕ್ಕಳಿಗೆ ಹೇಳಿದ್ರು. ಆಗ ತರಗತಿಯಲ್ಲಿದ್ದ ಅಷ್ಟೂ ಮಕ್ಕಳೂ ‘ಕೋರಸ್’ನಲ್ಲಿ “ಬರ್ಕ ಬರ್ಕಾ ಸಾರ್…” ಅಂತ ರಾಗವಾಗಿ ಉಲಿದಾಗ ಕಕ್ಕಾಬಿಕ್ಕಿಯಾಗುವ ಸರದಿ ಹೆಗಡೆ ಮಾಷ್ಟ್ರದಾಗಿತ್ತು. ಏನು ಅಂತ ಆ ಮಕ್ಕಳನ್ನು ಕೇಳಿದ್ರೆ..ಮತ್ತೊಂದು ಸಾರಿ ಏಕಕಂಠದಿಂದ ಹೊರಬಂದಿತ್ತು ಅಮೃತವಾಣಿ…. ”ಬರ್ಕ ಬರ್ಕಾ ಸಾರ್..”
ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ… ಯಾವುದೀ ದ್ವಿರುಕ್ತಿ…ಬರ್ಕ ಬರ್ಕ ಅಂತ ಯೋಚಿಸುತ್ತಾ ಏನೂ ಹೇಳದೇನೆ ತರಗತಿಯಿಂದ ಹೊರಬಂದ ಹೆಗಡೆ ಮೇಷ್ಟ್ರು ತಲೆಯಲ್ಲಿ ಅದೇ ಪ್ರಶ್ನೆ -ಏನಿರಬಹುದು ಈ ಬರ್ಕ ಬರ್ಕಾ..? ಕುತೂಹಲ ತಡೆಯಲಾಗದೆ ತಮ್ಮ ಸಹೋದ್ಯೋಗಿ ಮೇಷ್ಟ್ರ ಬಳಿ ಅದೇ ಪ್ರಶ್ನೆ ಹಾಕಿದರು.
ಕುಂದಾಪುರ ತಾಲೂಕಿನವರೇ ಆದ ಆ ಮೇಷ್ಟು ನಸುನಗುತ್ತಾ ಹೇಳಿದ್ದು ಇಷ್ಟು… “ಅದ್ರಲ್ಲಿ ವಿಶೇಷ ಎಂತಾ ಇಲ್ಲಾ ಮರಾಯ್ರೆ.. ಮಕ್ಕಳು ನಿಮ್ ಹತ್ರ ಕೇಳ್ತಾ ಇದ್ದಾವೆ, ಪ್ರಶ್ನೆಗಳಿಗೆ ಉತ್ರಾ ‘ಬರೆದುಕೊಂಡು ಬರಬೇಕಾ ಸಾರ್’. ಅದನ್ನೇ ಶಾರ್ಟ್ ಆಂಡ್ ಸ್ವೀಟ್ ಆಗಿ ಕುಂದಾಪ್ರ ಕನ್ನಡದಲ್ಲಿ ‘ಬರ್ಕ ಬರ್ಕಾ ಸಾರ್’ ಅಂತ ಕೇಳಿದಾರೆ” ಅಂದಾಗ ಒಗಟು ಬಿಡಿಸಿದ ಸಂಭ್ರಮದಲ್ಲಿ ಹೆಗಡೆ ಮಾಷ್ಟ್ರ ಮುಖದಲ್ಲಿ ನಗುವೊಂದು ಮೂಡಿತ್ತು. ಹೀಗಿದೆ ನೋಡಿ ಸ್ವಾಮಿ ಬರ್ಕ ಬರ್ಕಾ ಮಹಾತ್ಮೆ.

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...