ಕವಿತೆ ಎಂದು ಹೆಸರಿಟ್ಟೆ…ನಿಟ್ಟುಸಿರಿಟ್ಟೆ !!

3 11 2009

ಮನಸಿನ ಪುಟಗಳ ನಡುವೆ
ಖಾಲಿ ಹಾಳೆಗಳಿವೆ ಕೆಲವು..
ನೀ ಬರೆಯದೇ ಹೋದ
ಒಲವಿನ ಸಾಲುಗಳವು…
————————————
ನಿನ್ನ ನೆನಪುಗಳಿಂದ
ನನ್ನಲಿ ಮೂಡಿದ ಸಂಚಲನಗಳ ಸಂಕಲಿಸಿ
ಕವಿತೆ ಎಂದು ಹೆಸರಿಟ್ಟೆ…
ನಿಟ್ಟುಸಿರಿಟ್ಟೆ !!
————————————-
ಈ ಹನಿಗಳೆಲ್ಲ ನನ್ನವಲ್ಲ ಗೆಳತಿ,
ನೀನೇ ಬರೆಸಿದ್ದು…ಮತ್ತು ನೀನೇ ಬರಿಸಿದ್ದು                             
ನಾನೋ ಬರಿ ನೆಪಮಾತ್ರದವ
ಬರೆದಿದ್ದು ಮತ್ತು ಭರಿಸಿದ್ದು !!
————————————
ನಾನೇ ಬಯಸಿ ಪಡೆದರೆ ಅದು
ದಿವ್ಯ ಏಕಾಂತ…
ನೀನಿಲ್ಲದ ಒಂಟಿತನದಲಿ ಅನಿಸೋದು
ಈ ಬದುಕು ಏಕಂತ?
————————————
ಬರೆದು ಬರಿದಾಗಿಹೆನು ನಾ,
ಬರಿದೆ ನೆನಪಾಗುತಿಹೆ ನೀ,
ಬರದೆ ಹೋದರಿನ್ನು ನೀ,
ಬರದ ಬಯಲಂತೆ  ನಾ
—————————————-





ಹನಿ ಹನಿ ಕೂಡಿ ಈ ಕಣ್ಣೇ ಹಳ್ಳ …!!

8 10 2009

ಮೊದಲ 5 ಹನಿಗಳು  ಇವತ್ತಿನ ವಿ.ಕೆ. ಯ ಸಿಂಪ್ಲಿಸಿಟಿಯ ಅಂಗಳದಲ್ಲಿ ಬಿದ್ದಿವೆ… :-)

ಹಿಂದಿರುಗಿ ನೀ ಬರಲಾರೆಯೆಂದು 
ನನಗೂ ಗೊತ್ತಿದೆ ಗೆಳತಿ
ಹಿಂದುರುಗಿ ನೋಡಿಬಿಡು ಸಾಕು
ಕಣ್ತುಂಬಿಕೊಳ್ಳುವೆ ಒಂದು ಸರ್ತಿ
————————————
 ಪ್ರೀತಿ ಹಣತೆಗೆ ನೀನೆ ಎಣ್ಣೆ
ನಾ ಉರಿಯುವ ಬತ್ತಿ,
ಎಣ್ಣೆ ತೀರಿದರೂ ಉರಿಯುತಿದೆ
ನನ್ನೀ ದೇಹವೇ ಹೊತ್ತಿ…
ಅದೇ ಕಣೇ ಈ ಪ್ರೀತಿಯ ಶಕ್ತಿ
———————————-
ಮಾತೇ ಇಲ್ಲದೆ ಮುಗಿದೇ ಹೋಯ್ತು
ನಮ್ಮ ಪ್ರೀತಿ ನಾಟಕದ ಏಕಾಂಕ,
ತೆರೆ ಸರಿಯುವ ಮೊದಲೇ ತೆರೆ ಬಿತ್ತು
ಉಳಿದಿದ್ದು ಬರೀ ಏಕಾಂತ
———————————–
ಆಸೆಯೇನೋ ಇದೆ ಗೆಳತಿ ನಿನ್ನ ಮೇಲೆ
ಮುಗಿಲು ಮುಟ್ಟುವಷ್ಟು…
ಕೈಗೆಟುಕಬೇಕಲ್ಲ ಬಯಸಿದ್ದೆಲ್ಲ
ನನ್ನ ಪ್ರಾಪ್ತಿ ಎಷ್ಟೋ ಅಷ್ಟು
————————————
ಮುರಿದೇನೆ ಹೊರತು ಮಣಿಯಲಾರೆ
ಈ ಮುನಿಸು ಹಠ ನಿನಗೆ ತರವೇ ನೀರೆ?
ಮುರಿದೆರಡು ತುಂಡಾದ ಮೇಲೆ ಈ ನಂಟು
ಬದುಕಲಿ ನಮ್ಮ ಪಾಲಿಗೇನುಂಟು ?
ಜೋಡಿಸಬಹುದೇನೆ ಸುರಿದ್ಯಾವ ಅಂಟು?
————————————
ಬಾರದಿರು ಗೆಳತಿ ಮನಸಿನ ಕನಸಿನಂಗಳಕೆ ಆಡಲು
ಬರುವ ಮುನ್ನ ಹುಟ್ಟಿಸಿ ನಿರೀಕ್ಷೆಯ ಕಡಲು
ಬಳಿಕ ಹಿಂದಿರುಗಿ ಮರೀಚಿಕೆಯಂತೆ ಕಾಡಲು
ಸಾಕಿನ್ನು ಭರಿಸಲಾರದೀ ಒಡಲು
ಬರುವೆಯಾದರೆ ಬಾ ಇಲ್ಲೇ ಠಿಕಾಣಿ ಹೂಡಲು
ಮರಳುವ ಮಾತೇ ಇಲ್ಲದೆ ಕೂಡಲು..
ಎದೆಯ ಈ  ಪುಟ್ಟ  ಗೂಡೊಳು





ಅಣ್ಣಾವ್ರ ಸ್ಮರಣೆಗೊಂದು ಹಾಡುಗಳ ರಸಪ್ರಶ್ನೆ…

22 04 2009

ಮೊನ್ನೆ ಹನ್ನೆರಡನೇ ತಾರೀಕಿಗೆ ಅಣ್ಣಾವ್ರು ಇಲ್ಲವಾಗಿ ಮೂರು ವರ್ಷ ಕಳೆಯಿತು. ನಾಡಿದ್ದು 24ರಂದು ಅಣ್ಣಾವ್ರ ಜನ್ಮದಿನ. ಈ ಸಂದರ್ಭದಲ್ಲಿ ಅಣ್ಣಾವ್ರು ನಟಿಸಿದ/ಹಾಡಿದ/ನಟಿಸಿ-ಹಾಡಿದ ಹಾಡುಗಳನ್ನು ನೆನಪಿಸಿಕೊಳ್ಳುವ ಮೂಲಕ ಆ ಮಹಾನ್ ಚೇತನಕ್ಕೆ ನಮಿಸುವ ಒಂದು ಪ್ರಯತ್ನ ಇಲ್ಲಿದೆ. ಇಲ್ಲಿರುವ ಹತ್ತು ಪ್ರಶ್ನೆಗಳು ತೀರಾ ಸುಲಭವಾಗಿವೆನಿಮಗೆಲ್ಲರಿಗೂ ಉತ್ತರ ಖಂಡಿತವಾಗಿಯೂ ಗೊತ್ತಿರುತ್ತದೆ

 

1.          ಸಂಪತ್ತಿಗೆ ಸವಾಲು ಹಾಕುತ್ತಾ ಅಣ್ಣಾವ್ರು ಎಮ್ಮೆ ಸವಾರಿ ಮಾಡುತ್ತಿರುವ ಈ ಹಾಡನ್ನು ಎಂದಿಗಾದ್ರೂ ಮರೆಯಲಾದೀತೆ?

2.          ದೇವತಾ ಮನುಷ್ಯ ಇಲ್ಲಿ ಮಗಳು ಸುಧಾರಾಣಿಯೊಂದಿಗೆ ರಾಘವೇಂದ್ರರ ಸ್ತುತಿಸುತ್ತಿದ್ದಾರೆ

3.          ಅಶ್ವಮೇಧ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ರೌದ್ರಾವತಾರಕ್ಕೆ ಮೆರುಗನ್ನಿತ್ತ ಅಣ್ಣಾವ್ರ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು

4.          ಈ ನಾಡಲ್ಲಿ ಹುಟ್ಟಿದ ನಾವು ಧನ್ಯ ಅನ್ನಿಸುವಂತೆ ಮಾಡುವ ಈ ಹಾಡು ನಾಡಗೀತೆಗೆ ಪರ್ಯಾಯವೇನೋ ಅನ್ನಿಸುವಷ್ಟು ಜನಪ್ರಿಯ

5.          ಬಹಾದ್ದೂರ್ ಗಂಡಾಗಿ ಸೊಕ್ಕಿದ ರಾಜಕುಮಾರಿ ಜಯಂತಿಯ ಪೊಗರಿಳಿಸುವ ಈ ಮುತ್ತಿನಂತಹ ಹಾಡು

6.          ಏನೇ ಆದರೂ…. ಸದಾ ನಗುತಾ ನಲಿಯುತ್ತಿರು ಅನ್ನುವ ಅರ್ಥ ಕೊಡುವ ಈ ಗೀತೆ ಜೀವನೋತ್ಸಾಹದ ಪಾಠ ಹೇಳ್ತಾ ಇದೆ

7.          ಗಂಧದ ಗುಡಿಯ ಶೀರ್ಷಿಕೆ ಗೀತೆಯಲ್ಲಿ ಕಾಡಲ್ಲಿ ಪ್ರಾಣಿಗಳ ಜೊತೆ ಖುಷಿಯಿಂದ ನಲಿಯುವ ರಾಜ್ಕುಮಾರ್ ನೋಡೋಕೆ ಎರಡು ಕಣ್ಣು ಸಾಲದು

8.          ಭಕ್ತ ಕುಂಬಾರದಲ್ಲಿ ಭಕ್ತಿಯ ಪರಾಕಾಷ್ಟೆಯಲ್ಲಿ ತನ್ಮಯನಾಗಿ ಮಗುವನ್ನೇ ತುಳಿದರೂ ತಿಳಿಯದಷ್ಟು ಮೈಮರೆವಿನಲ್ಲಿ ಹಾಡುವ ಹಾಡು

9.          ಕುರುಬ ಕಾಳಿಮಾತೆಯ ಅನುಗ್ರಹಕ್ಕೆ ಪಾತ್ರನಾಗಿ ಕಾಳಿದಾಸನಾಗುವ ಮೊದಲು ಕುರಿಗಳನ್ನು ಮೇಯಿಸಲು ಹೊರಡುವಾಗ ಹಾಡುವ ಈ ಹಾಡು ಭಾರೀ ಜನಪ್ರಿಯ

10)         ಅಭಿಮಾನಿ ದೇವರುಗಳೇ ಅಂತಲೇ ವಿನಯದಿಂದ ಜನರನ್ನು ಪ್ರೀತಿಸುವ ಅಣ್ಣವ್ರುಅವರಿಂದಲೇ ನಾನು ಮೇಲೆ ಬಂದೆಅವ್ರು ನನ್ನ ಬೆನ್ನ ಹಿಂದೆ ಇದ್ರೆ ಯಾವ ಹೋರಾಟಕ್ಕೂ ಮುನ್ನುಗ್ಗಲು ತಯಾರು ಅನ್ನುತ್ತಿದ್ದಾರೆ

ಉತ್ತರ ನಿಮಗೆ ಗೊತ್ತಿರೋದೆ ಆಗಿರೋದ್ರಿಂದ… ಎಲ್ರೂ ಉತ್ತರ ಕೊಟ್ಟೇ ಕೊಡ್ತೀರ ಬಿಡಿ…