ಫ್ಯಾಷನ್ ಲೋಕದ ಒಳ-ಹೊರಗುಗಳ ಅನಾವರಣ

10 11 2008

ಕಳೆದ ವಾರದ ಅಂತ್ಯದಲ್ಲಿ ಎರಡು ಸಿನೆಮಾಗಳನ್ನು ನೋಡಿದೆ. ಮೊದಲನೆಯದು ಗೋಲ್‌ಮಾಲ್ ರಿಟರ್ನ್ಸ್. ಕೆಲವೊಂದು ಉತ್ತಮ ನಗೆಚಟಾಕಿಗಳು, ಒಂದೆರಡು ನಗು ಹುಟ್ಟಿಸುವ ಹಾಸ್ಯ ದೃಶ್ಯಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಹತ್ತರೊಟ್ಟಿಗೆ ಹನ್ನೊಂದು ಅನ್ನಿಸುವಂತಹ ಚಿತ್ರ. ಕೆಲವೊಂದು ನಗೆಚಟಾಕಿಗಳು ತೀರಾ ಹಳಸಲಾಗಿತ್ತು. ಗೋಲ್‌ಮಾಲ್ ಮೊದಲ ಭಾಗದಲ್ಲಿ ಇದ್ದ ಪರೇಶ್ ರಾವಲ್ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಕ್ಲೈಮಾಕ್ಸ್ ಕೂಡಾ ವಿಚಿತ್ರ ಸರ್ಕಸ್‌ಗಳಿಂದ ಹಾಸ್ಯವಾಗುವ ಬದಲು ಹಾಸ್ಯಾಸ್ಪದ ಅನ್ನಿಸುತ್ತಿತ್ತು. ಆದರೂ ಮಾಡೋಕೆ ಬೇರೆ ಏನೂ ಕೆಲ್ಸ ಇಲ್ಲದಿದ್ದರೆ ಹೊತ್ತು ಕಳೆಯಲು ಒಮ್ಮೆ ನೋಡಬಹುದು ಅಷ್ಟೆ. ಮುನ್ನಾಭಾಯ್ ಹೊರತು ಪಡಿಸಿದರೆ ಮಿಕ್ಕ ಯಾವುದೇ ಚಿತ್ರದ ಮುಂದುವರಿದ ಭಾಗ ಚೆನ್ನಾಗಿಲ್ಲ ಅನ್ನೋ ಮಾತಿಗೆ ಹೊಸ ದೃಷ್ಟಾಂತ ಒದಗಿಸಿದ್ದಷ್ಟೇ ಚಿತ್ರದ ಹೆಗ್ಗಳಿಕೆ.

 

ಇದಕ್ಕೆ ತೀರಾ ವಿರುದ್ಧವಾಗಿರುವ ಚಿತ್ರ ಫ್ಯಾಷನ್. ಮಧುರ್ ಭಂಡಾರ್ಕರ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಫ್ಯಾಷನ್ ಜಗತ್ತಿನ ಸುತ್ತ ಗಿರಕಿ ಹೊಡೆಯುವ ಚಿತ್ರ. ತೆರೆಯ ಮೇಲೆ ಬೆರಗು ಹುಟ್ಟಿಸುವ, ಕಣ್ಣುಕುಕ್ಕುವ ಫ್ಯಾಷನ್ ಲೋಕದ ತೆರೆಮರೆಯನ್ನು ತೆರೆದಿಡುವ ಪ್ರಯತ್ನದಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಕಣ್ಣುಕುಕ್ಕುವ ಬೆಳಕು ಕ್ಯಾಮರಾಗಳೆದುರಿಗಿನ ಭ್ರಾಮಕ ಜಗತ್ತಿನ ಹಿಂದಿರುವ ಕಹಿಸತ್ಯದಂತಹ ಕತ್ತಲೆಯನ್ನು ಯಥಾವತ್ತಾಗಿ ತೆರೆದಿಟ್ಟು ಬೆರಗುಗೊಳಿಸುತ್ತಾರೆ. ಪಾರ್ಟಿಗಳಿಗೆ ಕಳೆಯೇರಿಸಲು ದುಡ್ಡು ಕೊಟ್ಟು ಮಾಡೆಲ್‌ಗಳನ್ನು ಕರೆಸುವ ಶೋಕಿ, ಕರಿಯರ್ ಹೆಸರಿನಲ್ಲಿ ಕಾಂಟ್ರಾಕ್ಟುಗಳಿಗೆ ಸಹಿ ಮಾಡಿ ತಮ್ಮನ್ನು ತಾವೇ ಮಾರಿಕೊಂಡು ಹತಾಶರಾಗುವ ಹುಡುಗಿಯರು, ಅವರ ನಡುವಿನ ಸ್ಪರ್ಧೆ-ಒಳಜಗಳ, ಕಾಲೆಳೆಯುವಿಕೆ, ಚಮಚಾಗಿರಿ… ಯಾರನ್ನೋ ತುಳಿದುಕೊಂಡೇ ಇನ್ಯಾರೋ ಯಶಸ್ಸಿನ ಮೆಟ್ಟಿಲೇರುವುದು, ನಾಳೆ ಇನ್ನೊಬ್ಬನಿಗೆ ತುಳಿದವರೇ ಮೆಟ್ಟಿಲಾಗುವ ವಿಪರ್ಯಾಸ… ಹ್ಮ್… ಕಣ್ಣ ಮುಂದಿನ ಬೆಡಗಿಗೂ ಬೆನ್ನ ಹಿಂದಿನ ವಾಸ್ತವಕ್ಕೂ ಎಂತಹ ವ್ಯತ್ಯಾಸ.

 

ಚಂಡೀಗಡದಿಂದ ಮಾಡೆಲ್ ಆಗುವ ಕನಸು ಹೊತ್ತ ಹುಡುಗಿಯೊಬ್ಬಳನ್ನು ಕೈಬೀಸಿ ಕರೆಯುತ್ತದೆ ಮುಂಬೈ ಅನ್ನೋ ಮಾಯಾಂಗನೆ. ಅವಳು ಮೇಘನಾ ಮಾಥುರ್. ತಾನು ಮಾಡೆಲ್ ಮಾತ್ರವಲ್ಲ ಸೂಪರ್ ಮಾಡೆಲ್ ಆಗೇ ತೀರುತ್ತೇನೆ ಅನ್ನುವ ಆತ್ಮವಿಶ್ವಾಸ ಅವಳಲ್ಲಿ ತುಂಬಿ ತುಳುಕುತ್ತಿರುತ್ತದೆ. ಅವಳಿಗೊಬ್ಬ ಪ್ರಮೋಟರ್. ಹೆಸರು ರೋಹಿತ್. ಅವನ ನೆರವಿಂದ ಬೆಳೆಯುವ ಕಾಂಟಾಕ್ಟ್‌ಗಳು…ಅವಳನ್ನು ಅವಕಾಶಗಳ ಬಾಗಿಲಿಗೆ ಕೊಂಡೊಯ್ಯುತ್ತವೆ. ಹೀಗೆ ಖ್ಯಾತನಾಮರ ಸಖ್ಯ ಬೆಳೆಸುವಷ್ಟರಲ್ಲಿ ಅವಳಿಗೊಬ್ಬ ಗೆಳೆಯೆ ಸಿಗುತ್ತನೆ. ಅವನೊಬ್ಬ ಅವಕಾಶಗಳು ಸಿಗದೆ ಯಶಸ್ಸಿಗಾಗಿ ಹಾತೊರೆಯುವ ಅನ್‌ಸಕ್ಸೆಸ್‌ಫುಲ್ ಮಾಡೆಲ್. ಅವನಿಗೆ ಹತ್ತಿರವಾಗುವಷ್ಟರಲ್ಲಿ ಅವಳು ಖ್ಯಾತ ಮಾಡೆಲ್ ಶೊನಾಲಿಗೆ ಖೊಕ್ ನೀಡಿ ಪ್ರತಿಷ್ಟಿತ ಫ್ಯಾಷನ್ ಡೆಸೈನರ್ ಬ್ರಾಂಡ್‌ಗೆ ಸೇರಿಕೊಳ್ಳುತ್ತಾಳೆ. ಮೊದಲ ಸಲ ಸ್ವಲ್ಪ ಮುಜುಗರ ಅನ್ನಿಸುತ್ತದೆಆಮೇಲಾಮೇಲೆ ಎಲ್ಲಾ ತೀರಾ ಸಹಜ ಅನ್ನಿಸುವಷ್ಟು ರೂಡಿಯಾಗುತ್ತೆ ಬಿಡು.. ಅಂದ ಸಹ ಮಾಡೆಲ್‌ಳ ಮಾತು ಎಷ್ಟು ಸತ್ಯ ಅನ್ನಿಸುವಷ್ಟರಲ್ಲೆ ಅವಳು ಯಶಸ್ಸಿನ ಶಿಖರವೇರಿಯಾಗಿರುತ್ತೆ. ಅದಕ್ಕಾಗಿ ಕಳೆದುಕೊಂಡಿದ್ದೇನು ಅನ್ನುವ ಜಿಜ್ಞಾಸೆ ಆಗಾಗ ಕಾಡುತ್ತಿರುತ್ತದೆ. ಆದರೆ ಹಾಗಂತ ತಲೆ ಕೆಡಿಸಿಕೊಳ್ಳುತ್ತಾ ಕೂತರೆ ಈ ಫ್ಯಾಷನ್ ಜಗತ್ತು ಅವಳನ್ನು ಬಿಟ್ಟು ಬಹು ದೂರಕ್ಕೆ ಹೋಗಿರುತ್ತದೆ ಅನ್ನುವ ವಾಸ್ತವದ ಎದುರು ಮನಸ್ಸಿನ ಮಾತಿನದ್ಯಾವ ಲೆಕ್ಕ.

 

ಇತ್ತ ಯಶಸ್ಸಿನ ಅಲೆಯಲ್ಲಿ ತೇಲುತ್ತ ಮೈಮರೆತ ಮಗಳ ಕುರಿತು ತಂದೆತಾಯಿಗಳಿಗೆ ಆತಂಕ. ಆದರೆ ಯಶಸ್ಸು ಕೊಡುವ ಅಮಲಿನಲ್ಲಿ ಇವೆಲ್ಲ ಕ್ಷುಲ್ಲಕ ಅನ್ನಿಸಿ ತನ್ನ ಹೆತ್ತವರಿಂದ, ಗೆಳೆಯನಿಂದ ಮೇಘನಾ ದೂರಾಗುತ್ತಿದ್ದರೆ, ಅತ್ತ ಅವಕಾಶ ಕಳೆದುಕೊಂಡು ಹತಾಶಳಾಗುವ ಮೊದಲೇ ಹಾದಿ ತಪ್ಪಿದ್ದ ಶೋನಾಲಿ ಇನ್ನಷ್ಟು ಡ್ರಗ್, ಮದಿರೆಯ ಸಖ್ಯದಲ್ಲಿ ತನ್ನನ್ನು ತಾನೆ ನಾಶ ಮಾಡಿಕೊಳ್ಳುತ್ತಿರುತ್ತಾಳೆ. ಶೋ ಒಂದರಲ್ಲಿ ಎದೆಯ ಕಂಚುಕ ಜಾರಿದಾಗ ಅವಳು ಖಿನ್ನತೆಯ ಕೊಳದಲ್ಲಿ ಕತ್ತಿನ ತನಕ ಮುಳುಗೇಳುತ್ತಿರುತ್ತಾಳೆ. ಕೊನೆಗೆ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚಿಯಾಗುತ್ತಾಳೆ. ಎಲ್ಲಾ ತನ್ನ ಕಿರುಬೆರಳ ಸನ್ನೆಗೆ ಕುಣಿವ ದಾಳಗಳೆಂಬಂತೆ ಕುಣಿಸುವ ಮೇಘನಾಗೆ ತಾನು ಇನ್ಯಾರದೋ ಸೂತ್ರದ ಗೊಂಬೆ ಅನ್ನುವುದು ಮನವರಿಕೆಯಾಗುವ ಕಾಲವೂ ಬರುತ್ತದೆ. ತನ್ನನ್ನು ಮುಂದಕ್ಕೆ ತಂದ ಫ್ಯಾಷನ್ ಡೆಸೈನರ್ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಅನ್ನುವ ಸತ್ಯವನ್ನು ಹೇಳಿದಾಗ ಅವನ ಪ್ರತಿಕಿಯೆ, ಅವಳ ಕರಾರಿನಲ್ಲಿದ್ದ ಶರತ್ತುಗಳು… ಅವಳನ್ನು ಭ್ರಮನಿರಸನಗೊಳಿಸುತ್ತವೆ. ಪಾರ್ಟಿಯೊಂದರಲ್ಲಿ ಅವನ ಹೆಂಡತಿಯ ಜೊತೆ ಮುಖಾಮುಖಿಯಾದಾಗ ಅವಳಿಗೆ ತನ್ನ ಸಂಬಂಧದ ಕ್ಷಣಿಕತೆ ಅರಿವಾಗುತ್ತದೆ. ಆಗ ಹುಟ್ಟುವ ವ್ಯಕ್ತಿಗತ ಮತ್ತು ವೃತ್ತಿಗತ ಸಂಬಂಧಗಳ ನಡುವಿನ ಘರ್ಷಣೆಗೆ ಮೇಘನಾ ಬಲಿಯಾಗುತ್ತಾಳೆ. ಅಲ್ಲಿಂದ ಅವಳ ದುರ್ದಿನಗಳು ಶುರುವಾಗುತ್ತವೆ. ಹಿಂದೆ ತಾನು ಶೋನಾಲಿಯನ್ನು ಮೆಟ್ಟಿ ಮೇಲಕ್ಕೇರಿದಂತೆ ಇನ್ಯಾರೋ ಅನಾಮಿಕಳು ಆ ಜಾಗಕ್ಕೆ ಲಗ್ಗೆಯಿಡುತ್ತಾಳೆ…. ಹೀಗೆ ಸಾಗುವ ಕತೆ ಕೊನೆಯಲ್ಲಿ ಸುಖಾಂತ್ಯ ಕಾಣುತ್ತದಾದರೂ…. ಆ ನಡುವೆ ನಡೆಯುವ ವಿದ್ಯಮಾನಗಳು, ತಾಕಲಾಟಗಳು, ಹತಾಶೆ… ಇದನ್ನೆಲ್ಲ ಅನುಭವಿಸಬೇಕೆಂದಿದ್ದರೆ… ಒಮ್ಮೆ ಫ್ಯಾಷನ್ ಚಿತ್ರ ನೋಡಿ.





ಹಳಸಲು ಚಿತ್ರಾನ್ನಕ್ಕೆ ‘ಉಪ್ಪಿ’ನ ಒಗ್ಗರಣೆ…..!!

29 09 2008

ಒಂದೇ ಮಾತಲ್ಲಿ ಹೇಳ್ತೀನಿ ಕೇಳಿ. ಇದು ಉಪ್ಪಿಯ ಕಟ್ಟಾ ಅಭಿಮಾನಿಗಳಿಗೆ ಮಾತ್ರ ತಯಾರಾದ ಚಿತ್ರ. ಉಪ್ಪಿಯ ಹಳೆಯ ಚಿತ್ರಗಳ ಮಟ್ಟಕ್ಕೆ ಮುಟ್ಟುವ ಮಾತು ಬದಿಗಿರಲಿ…ಅದರ ಸನಿಹ ಕೂಡಾ ಸುಳಿಯಲು ಯೋಗ್ಯತೆ ಇಲ್ಲದ, ಅಸಲಿಗೆ ಕಥೆ ಅಂತ ಕರೆಸಿಕೊಳ್ಳಲೇ ಅಯೋಗ್ಯವೆನ್ನಿಸುವ ವಿಷಯವನ್ನಿಟ್ಟುಕೊಂಡು ಇಂತದ್ದೊಂದು ಚಿತ್ರವನ್ನು ಅಭೂತಪೂರ್ವ ಚಿತ್ರ ಅನ್ನುವ ರೀತಿಯಲ್ಲಿ ಪ್ರಚಾರ ಕೊಡುತ್ತಿರುವ ಚಿತ್ರತಂಡ, ಅವರು ಬಯಸಿದಂತೆ ಹಾಡಿ ಹೊಗಳಿದ ಮಾಧ್ಯಮಗಳು….ಇವರೆಲ್ಲ ಬುದ್ಧಿವಂತರೇ… ಅವರು ಹೇಳಿದ್ದನ್ನು ನಂಬಿಕೊಂಡು ಓಂ, , ರಕ್ತಕಣ್ಣೀರು ಚಿತ್ರಗಳ ಉಪ್ಪಿಯನ್ನು ಹುಡುಕಲು ಹೋಗೋ ನಾವೇ ದಡ್ಡರು. ಮೂಲ ತಮಿಳು ಚಿತ್ರ ನಾನು ನೋಡಿಲ್ಲ. ಅದು ಹೇಗಿದೆಯೋ ಗೊತ್ತಿಲ್ಲ. ಇದು ಮಾತ್ರ ಪಂಚಾಮೃತದ ಹೆಸರಲ್ಲಿ ಹಳಸಲು ಚಿತ್ರಾನ್ನಕ್ಕೆ ಬರೇ ಉಪ್ಪಿನ ಒಗ್ಗರಣೆ ಹಾಕಿದ್ದಾರೆ. ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ತಿಳ್ಕೊಂಡು ಬರೀ ಉಪ್ಪು ಸುರಿದು ಮಾಡಿದ ಈ ಚಿತ್ರ ಉಪ್ಪಿಯ ಪ್ಲಾಪ್ ಚಿತ್ರಗಳ ಹನುಮಂತನ ಬಾಲದಂತಹ ಪಟ್ಟಿಗೆ ಇನ್ನೊಂದು ಚಿತ್ರವಾಗುತ್ತಾ….ಅಥವಾ ಬರೀ ಉಪ್ಪಿ ಅಭಿಮಾನಿಗಳೇ ಚಿತ್ರವನ್ನು ದಡ ಹತ್ತಿಸುತ್ತಾರಾ ಕಾದು ನೋಡಬೇಕು.

 

ನಿಜ ಹೇಳ್ಬೇಕಂದ್ರೆ ಈ ಚಿತ್ರ ನೋಡಿ ಬಂದ ಮೇಲೆ ಈ ಚಿತ್ರಕ್ಕೊಂದು ವಿಮರ್ಶೆ ಬರೆಯೋ ಸಹನೆ, ಮನಸ್ಸು ಎರಡೂ ನನ್ನಲ್ಲಿ ಇದ್ದಿರಲಿಲ್ಲ. ಆದರೆ ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳನ್ನು ಓದಿದ ಮೇಲೆ ಬರೆಯಲೇಬೇಕು ಅನ್ನುವ ನಿರ್ಧಾರ ಮಾಡಿದೆ. ಇಡೀ ಚಿತ್ರದಲ್ಲಿ ಎಲ್ಲೂ ಹುಡುಕಿದರೂ ಸಿಗದ ಅದ್ಯಾವ ಪಂಚಾಮೃತದ ಸವಿಯನ್ನು ಇವರೆಲ್ಲ ಉಂಡಿದ್ದಾರೋ ಅನ್ನೋದು ಆ ಭಗವಂತನೇ ಬಲ್ಲ. ಚಿತ್ರದಲ್ಲಿ ಒಳ್ಳೆಯ ಅಂಶವನ್ನು ಭೂತಗಾಜಿನಲ್ಲಿಟ್ಟು ಹುಡುಕಿದರೂ ಕೂಡಾ ಕಾಣ ಸಿಗೋದು ಇಷ್ಟೇ… ಮಂಗಳೂರು ಶೈಲಿಯ ಕನ್ನಡದಲ್ಲಿ ಉಪ್ಪಿ ಹೇಳಿದ ಎರಡ್ಮೂರು ಡೈಲಾಗುಗಳು, ಎರಡು ಹಾಡುಗಳು. ಅಷ್ಟು ಬಿಟ್ರೆ ಕ್ಯಾಮರಾಮನ್, ನಾಯಕಿಯರು, ಪೋಷಕ ಪಾತ್ರಗಳು ಯಾರಿಗೂ ಇಲ್ಲೇನು ಕೆಲಸವೇ ಇಲ್ಲ. ಬರೀ ಚಿತ್ರವಿಚಿತ್ರ ಸ್ಟಂಟುಗಳು, ಅದೇ ಅದೇ ಕೋರ್ಟಿನ ದೃಶ್ಯಗಳು, ನಡುವೆ ಒಂದೆರಡು ಡೈಲಾಗುಗಳು. ಮೊನ್ನೆ ಯಾವುದೋ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಉಪ್ಪಿ ಹೇಳ್ತಾ ಇದ್ದರು. ನಾನು ಚಿತ್ರವನ್ನು 10 ವರ್ಷ ಮುಂಚೆ ಮಾಡಿಬಿಟ್ಟೆ. ಆ ಕಾಲಕ್ಕೆ ಅದು ತುಂಬಾ ಅಡ್‌ವಾನ್ಸ್‌ಡ್ ಆಗಿತ್ತು. ಅದು ಈಗ ಬಂದಿದ್ರೆ ಇನ್ನೂ ಹೆಚ್ಚು ಜನ ಇಷ್ಟ ಪಡ್ತಾ ಇದ್ರೆನೋ ಅಂತ. ಇರಬಹುದೇನೋ..ಉಪ್ಪಿ. ಆದರೆ ಬುದ್ಧಿವಂತ ಮಾತ್ರ ಖಂಡಿತ ಹಾಗಲ್ಲ ಬಿಡಿ. ಅದು ಯಾವ ಕಾಲಕ್ಕೂ ಬರಬಾರದಂತ ಚಿತ್ರ. ಈ ಭಾಗ್ಯಕ್ಕೆ ತಮಿಳಿಂದ ಕತೆ ಬರಬೇಕಿತ್ತಾ?

 

ಸಾಕು ಈ ಚಿತ್ರಕ್ಕೆ ಇದಕ್ಕಿಂತ ಹೆಚ್ಚು ಬರೆಸಿಕೊಳ್ಳುವ ಯೋಗ್ಯತೆ ಖಂಡಿತ ಇಲ್ಲ. ಅಥವ ಈ ಚಿತ್ರದ ಬಗ್ಗೆ ಬರೆಯುವಷ್ಟು, ಇದರಲ್ಲಿ ಪಂಚಭಕ್ಷ ಪರಮಾನ್ನ ಹುಡುಕುವಷ್ಟು ಬುದ್ಧಿವಂತಿಕೆ ನನಗೆ ಇಲ್ಲವೇನೋ. ನಾನು ಓದಿದ ಪತ್ರಿಕೆಗಳಲ್ಲಿ ಟೈಮ್ಸ್ ಆಫ್ ಇಂಡಿಯಾ ಕನ್ನಡದಲ್ಲಿ ಮಾತ್ರ ಚಿತ್ರದ ಸರಿಯಾದ ವಿಮರ್ಶೆಯನ್ನು ಬರೆದಿತ್ತು. ಉಪ್ಪಿಯ ಚಿತ್ರ ಅಂತ ನಿರೀಕ್ಷೆ ಇಟ್ಟುಕೊಂಡು ಹೋಗುವವರಿಗಾಗುವ ನಿರಾಸೆಯನ್ನು ಸರಿಯಾಗಿ ಗುರುತಿಸಿತ್ತು. ಚಿತ್ರ ಮುಗಿದ ಮೇಲೆ ಉಪೇಂದ್ರ ಹೇಳುತ್ತಿದ್ದ ಒಂದೇ ಡೈಲಾಗು ಕಿವಿಯಲ್ಲಿ ಅನುರಣಿಸುತ್ತಿತ್ತು… ನಾನು ಅವನಲ್ಲ… ನಾನು ಅವನಲ್ಲ. ಹೌದು ಉಪ್ಪಿ ಸರಿಯಾಗಿಯೇ ಹೇಳಿದ್ದೀಯ…ನೀನು ಖಂಡಿತ ಆ ಹಳೆಯ ಉಪ್ಪಿಯಲ್ಲ.





ವೆಡ್‌ನಸ್ಡೇ… ನೋಡ್ದಿದ್ರೆ ನಷ್ಟ ನಿಮ್ಗೇನೆ…

21 09 2008

ಈ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ.-ವಿಚಿತ್ರವಾಗಿದೆ. ನೂರು ನಿಮಿಷಕ್ಕೂ ಕಡಿಮೆ ಅವಧಿಯ ಇಡೀ ಚಿತ್ರದ ಪರಿಕಲ್ಪನೆ, ಕಥೆಯನ್ನು ವಿವರಿಸುವಲ್ಲಿನ ಬಿಗಿ ಹಿಡಿತ, ಚಿತ್ರೀಕರಿಸಿದ ರೀತಿ ಕೊನೆಯಲ್ಲಿ ಎತ್ತುವ ಪ್ರಶ್ನೆಗಳು…ಎಲ್ಲವೂ ಇಷ್ಟವಾಗುತ್ತದೆ. ಮುಂಬೈ ಮೇರಿ ಜಾನ್ ನಂತರ ನಾನು ನೋಡಿದ ಈ ಚಿತ್ರ ಒಂದರ್ಥದಲ್ಲಿ ಅದರಲ್ಲಿ ನಿಲ್ಲಿಸಿಹೋದ ಕಥೆ ಮುಂದುವರಿಸಿದಂತಿದೆ.. ಅದರೂ ಇನ್ನೊಂದು ರೀತಿಯಿಂದ ನೊಡಿದ್ರೆ ಆ ಚಿತ್ರಕ್ಕೆ ಸಂಪೂರ್ಣ ವಿರುದ್ಧವಾಗೂ ಇದೆ. ಇದೇನು ಹಿಂಗೆ ಪರಸ್ಪರ ಒಂದಕ್ಕೊಂದು ವಿರೋಧವಾದ ಹೇಳಿಕೆಗಳು ಅಂತೀರಾ? ಚಿತ್ರ ನೋಡಿ ಆಮೇಲೆ ನಿಮಗೇ ಅರ್ಥವಾಗುತ್ತೆ!!

 

 

ಇದೂ ಕೂಡಾ ಭಯೋತ್ಪಾದನೆಯ ಸುತ್ತ ಹೆಣೆದ ಚಿತ್ರ. ಇಷ್ಟು ಬಿಗಿಯಾದ ನಿರೂಪಣೆ ಇರುವ ಚಿತ್ರಗಳನ್ನು ಕನ್ನಡದಲ್ಲಿ ನಾನು ನೊಡಿದ್ದು ಎರಡೇ ಎರಡು… ಅದು ನಿಷ್ಕರ್ಷ ಮತ್ತು ಸೈನೇಡ್.

 

ಇಡೀ ಚಿತ್ರದ ಕಥೆ ನಡೆಯುವುದು ಒಂದು ಬುಧವಾರ ಮಧ್ಯಾಹ್ನ 2ರಿಂದ 6 ಗಂಟೆಯ ನಡುವಿನ ಅವಧಿಯಲ್ಲಿ. ಸುಮಾರು ನೂರು ನಿಮಿಷಗಳಷ್ಟಿರುವ ಚಿತ್ರದ ಓಟ ಶುರುವಾಗುವುದು ನಿವೃತ್ತ ಪೊಲಿಸ್ ಕಮಿಶನರ್ ಪ್ರಕಾಶ್ ರಾಠೋಡ್ ನೆನಪಿಸಿಕೊಳ್ಳುವ ಆ ಬುಧವಾರದ ಘಟನೆಗಳಿಂದ. ಒಬ್ಬ ಅನಾಮಧೇಯ ವ್ಯಕ್ತಿ ಕಮಿಶನರ್‌ಗೆ ಕರೆ ಮಾಡಿ ನಗರದಲ್ಲಿನಾಲ್ಕು ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸುತ್ತಾನೆ. ಅದು ಹುಸಿ ಕರೆ ಅಲ್ಲ ಅನ್ನೋದನ್ನು ಸಾಬೀತು ಮಾಡಲು ಅದಕ್ಕೂ ಮೊದಲು ತಾನು ಪೋಲಿಸ್ ಠಾಣೆಯಲ್ಲೇ ಬಾಂಬ್ ಇಟ್ಟು ಹೋದ ಬಗ್ಗೆ ತಿಳಿಸುತ್ತಾನೆ. ಅವನ ಬೇಡಿಕೆ ಎಂದರೆ ನಾಲ್ಕು ಜನ ಭಯೋತ್ಪಾದಕರ ಬಿಡುಗಡೆ……ಮುಂದೇನಾಯಿತು ಅನ್ನುವುದು ಹೇಳಿ ಬಿಟ್ರೆ ಸ್ವಾರಸ್ಯ ಇರೊಲ್ಲ.

 

ಚಿತ್ರದ ವಸ್ತುವಿನ ಬಗ್ಗೆ ಮಾತಾಡಲು ಹೊರಟರೆ ಚಿತ್ರದ ಕ್ಲೈಮಾಕ್ಸ್ ಬಗ್ಗೆ ಹೇಳಲೇ ಬೇಕಾಗುತ್ತದೆ. ಹಾಗಾಗಿ ಅದನ್ನು ನಾನಿಲ್ಲಿ ವಿವರಿಸಲು ಹೊಗೋದಿಲ್ಲ. ಆದರೆ ಕೊನೆಯಲ್ಲಿ ಚಿತ್ರ ಮುಂದಿಡುವ ವಿಚಾರ, ಅದನ್ನು ಹೇಳಿದ ರೀತಿ…ಅದ್ಭುತ ಅನ್ನುವ ಪದ ಬರೇ ಸವಕಲು ಅನ್ನಿಸಿಬಿಡುವಷ್ಟು ಚೆನ್ನಾಗಿದೆ. ಆದರಲ್ಲೂ ಚಿತ್ರದ ಕೊನೆಯ ಅರ್ಧ ಗಂಟೆ ಬಗ್ಗೆ ಹೇಳೋದಕ್ಕಿಂತ ಅದನ್ನು ನೋಡಿ ಅನುಭವಿಸಬೇಕು. ಇಡೀ ಚಿತ್ರದ ಕೇಂದ್ರಬಿಂದುವಾಗಿರುವ ನಾಸಿರುದ್ದೀನ್ ಶಾಗೆ ನಾನಂತೂ ನೂರಕ್ಕೆ ನೂರು ಅಂಕ ಕೊಡ್ತೀನಿ. ಅನುಪಮ್ ಖೇರ್‌ಗೆ ಡಿಸ್ಟಿಂಕ್ಶನ್. ಹಾಗೆಯೆ ನಿರ್ದೇಶಕ ನೀರಜ್ ಪಾಂಡೆ ಮತ್ತು ಚಿತ್ರ ತಂಡಕ್ಕೆ  ಇಂತಹ ಅದ್ಭುತ ಚಿತ್ರ ನೀಡಿದ್ದಾಕ್ಕಾಗಿ ನೂರೆಂಟು ಶಹಬ್ಬಾಸ್‌ಗಳನ್ನು ಕೂಡಾ. ರೇಟಿಂಗ್ ಕೊಡೋದಿದ್ರೆ ಕಣ್ಣು ಮುಚ್ಚಿಕೊಂಡು ನಾಲ್ಕು ಸ್ಟಾರ್ ಕೊಡಬಹುದು. ಚಿತ್ರ ನೋಡಿ ಹೊರಬಂದ ಮೇಲೆ ಚಿತ್ರ ಬಹುಕಾಲ ನಿಮ್ಮನ್ನು ಕಾಡುವುದಂತೂ ಸತ್ಯ .ಒಂದು ಮರೆಯಲಾಗದ ಚಿತ್ರ ನೋಡಿದ ಖುಷಿ ನಿಮ್ಮದಾಗಲಿ.