ನಿರೀಕ್ಷೆಯಲ್ಲಿನ ಸುಖ ನಿಜದಲ್ಲಿಲ್ಲ !!

Posted: ಜುಲೈ 9, 2008 in ವಿಚಾರ
ಟ್ಯಾಗ್ ಗಳು:,

 

ನಿಮಗೆಂದಾದರೂ ಈ ರೀತಿಯ ಅನುಭವವಾಗಿದೆಯೇ? ಯಾರನ್ನೋ ಬಹುಕಾಲದ ನಂತರ ಭೇಟಿಯಾಗೋದು ಅಂತ ನಿಶ್ಚಯವಾಗಿರುತ್ತೆ. ಅವರಿನ್ನೇನು ನಾಳೆ ಬರಬಹುದು ಅನ್ನೋ ಹೊತ್ತಿಗಾಗಲೇ ಮನಸ್ಸಿನಲ್ಲಿ ಕಾತುರ, ಸಡಗರ-ಸಂಭ್ರಮ. ಆದರೆ ಆ ನಾಳೆ ಬಂದಾಗ, ಅವರನ್ನು ಭೇಟಿ ಆದಾಗ ಮನಸ್ಸು ಸಂತೋಷದಲ್ಲಿ ಇದ್ದರೂ ಕೂಡಾ ಏನೋ ಅಷ್ಟು ಖುಶಿಯಾಗಲಿಲ್ಲಪ್ಪ ಅಂತ ಒಳಮನಸು ಯಾಕೋ ಪಿಸುಗುಟ್ಟಿದಂತಾಗುತ್ತದೆ. ಬಹು ಆಸೆಯಿಂದ ಕೊಂಡು ತಂದ ವಸ್ತು-ವಡವೆ, ಆಸೆಪಟ್ಟು ಆರ್ಡರ್ ಮಾಡಿದ ಐಸ್‌ಕ್ರೀಂ, ಕಾದು ಬ್ಲ್ಯಾಕ್‌ನಲ್ಲಿ ಟಿಕೇಟ್ ಕೊಂಡು ನೋಡಿದ ಸಿನೆಮಾ… ಹೀಗೆ ಯಾವುದು ಬೇಕಿದ್ರೂ ಆಗಬಹುದು. ನಾವು ಅದರ ನಿರೀಕ್ಷೆಯಲ್ಲಿ ಕಂಡ ಸುಖ, ತೃಪ್ತಿಗಳು, ಅದು ದಕ್ಕಿದಾಗ ಸಿಗದೇ ಹೋಗಬಹುದು. ಒಮ್ಮೊಮ್ಮೆ ನಮ್ಮ ನಿರೀಕ್ಷೆಯಲ್ಲಿ ಇದ್ದ ಕಲ್ಪನೆಗೂ, ವಾಸ್ತವದಲ್ಲಿ ಇರುವುದೋ ಇಲ್ಲಾ ಘಟಿಸುವುದಕ್ಕೋ ವ್ಯತ್ಯಾಸ ಇದ್ದಾಗ ಹೀಗಾಗುತ್ತದೆ. ಆದರೆ ಎಷ್ಟೋ ಸಾರಿ ಯಾವ ಕಾರಣವೂ ಇಲ್ಲದೆ ಈ ಅತೃಪ್ತಿ ಹೆಡೆಯೆತ್ತಬಹುದು. ಇದಕ್ಕೆ ಕಾರಣವೇನಿರಬಹುದು?

 

ಮನಸ್ಸೆನ್ನುವುದು ಅಂಕೆಯಿಲ್ಲದ ಕಪಿಯಂತದ್ದು. ಇದು ಯಾವ ಪ್ರಚೋದನೆಗೋ, ಘಟನೆಗೋ ಸ್ಪಂದಿಸಿ ಕ್ಷಣಕ್ಷಣದಲ್ಲಿ ಬದಲಾಗುತ್ತಾ ಇರುತ್ತದೆ. ಕೆಲವೊಮ್ಮೆ ಹುಚ್ಚು ಕುದುರೆಯಂತೆ ಅತ್ಯುತ್ಸಾಹದಿಂದ ಕೆನೆಯುತ್ತಾ ಮುನ್ನುಗ್ಗಿದರೆ, ಮತ್ತೊಮ್ಮೆ ಬಸವನ ಹುಳುವಿನಂತೆ ನಿಂತಲ್ಲೇ ತೆವಳುತ್ತಿರುತ್ತದೆ. ಹಾಗಾಗಿ ನಿರೀಕ್ಷೆ ಮಾಡುವಾಗಿನ ಮನಸ್ಥಿತಿ ಬದಲಾಗಿ, ವಾಸ್ತವದಲ್ಲಿನ ಘಟನೆ ಯಾ ಅನುಭೂತಿಗೆ ಅದು ಸ್ಪಂದಿಸುವ ರೀತಿಯೇ ಬೇರೆಯಾಗಿ ಬಿಡುವುದರಿಂದ ಹೀಗಾಗುತ್ತಿರಬಹುದೇ? ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಅಚ್ಚರಿಯಲ್ಲಿ ಇರುವ ಥ್ರಿಲ್ ನಿರೀಕ್ಷಿತವಾದುದರಲ್ಲಿ ಇಲ್ಲದಿರುವುದೇ ಹೀಗೆ ಅನ್ನಿಸಲು ಹೇತುವಾಗಬಹುದೇ? ಇಲ್ಲಾ ಅಡಿಗರು ಹೇಳಿರುವಂತೆ ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ ತುಡಿಯೋದೇ ಮನಸಿನ ಈ ಅತೃಪ್ತಿಯ ಮರ್ಮವಾಗಿರಬಹುದೇ? ಇದಕ್ಕೆ ಉತ್ತರ ಹೇಳೋದು ಬಹುಶಃ ಮನಃಶಾಸ್ತ್ರಜ್ಞರಿಗೂ ಕಷ್ಟಸಾಧ್ಯ ಅನ್ನಿಸುತ್ತೆ.

 

ಇದನ್ನೇ ಇನ್ನೂ ಒಂದು ಕೋನದಿಂದ ಕಂಡಾಗ ಅನ್ನಿಸುವುದೇನೆಂದರೆ, ನಮ್ಮ ಸುಪ್ತಪ್ರಜ್ಞೆಯ ಆಳದಲ್ಲೆಲ್ಲೋ ಹಿಂದೆ ಈ ರೀತಿಯ ಘಟನೆಗಳು ನಡೆದಾಗ ಸಿಕ್ಕ ಸಂತೃಪ್ತಿ, ಅನುಭೂತಿ, ಖುಷಿಗಳು ಅಚ್ಚೊತ್ತಿರುತ್ತವೆ. ಪ್ರಸ್ತುತ ಅದೇ ರೀತಿಯ ಘಟನೆ-ಅನುಭೂತಿಗೆ ನಾವು ಒಳಗಾದಾಗ, ಸುಪ್ತ ಮನಸ್ಸಿನ ತಕ್ಕಡಿಯಲ್ಲಿ ನಮಗೆ ಅರಿವಿಲ್ಲದಂತೆ ಹಿಂದಿನ ಅನುಭೂತಿಯೊಂದಿಗೆ ತಾಳೆ ಹಾಕಿ ನೋಡುವ ಪ್ರಕ್ರಿಯೆ ನಡೆಯುತ್ತಿರಬಹುದು. ಈ ತುಲನೆಯ ಫಲಶ್ರುತಿಯಾಗಿಯೇ ಏನೋ ಅಷ್ಟು ಖುಷಿಯಾಗ್ಲಿಲ್ಲಪ್ಪ ಅಂತ ನಮಗನ್ನಿಸುತ್ತಿರಬಹುದೇ? ಒಂದು ಪುಟ್ಟ ಉದಾಹರಣೆ ನೋಡೋದಾದ್ರೆ, ಸಚಿನ್ ತೆಂಡೂಲ್ಕರ್ ಈಗ ಒಂದು ಸೆಂಚುರಿ ಹೊಡೆದ ಅಂತಿಟ್ಟುಕೊಳ್ಳೋಣ. ಅದನ್ನು ಅವನ ಹಿಂದಿನ ಸೆಂಚುರಿಗಳಿಗೆ ಹೋಲಿಸಿ, ಏನೇ ಆದ್ರೂ ಮುಂಚಿನ ಸಚಿನ್ ಅಲ್ಲಪ್ಪ.. ಅದರ ಮಜವೇ ಬೇರೆ ಇತ್ತು.. ಅಂತ ನಾವು ಉದ್ಘರಿಸುತ್ತೇವೆ. ಅವನು ಇವತ್ತೂ ಚೆನ್ನಾಗಿಯೇ ಆಡಿರುತ್ತಾನೆ. ಆದರೆ ಅವನ ಮುಂಚಿನ ಆರ್ಭಟ, ಅಬ್ಬರ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದಾಗಿ, ಸಚಿನ್ ಆಟ ಅಂದ್ರೆ ಆ ಥ್ರಿಲ್ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೇವೆ. ಹಾಗಾಗಿ ಅವನು ಚೆನ್ನಾಗಿಯೇ ಆಡಿದ್ರೂ ಕೂಡಾ, ಹಿಂದಿನ ಸಚಿನ್ ಜೊತೆ ಸದಾ ತಾಳೆ ಹಾಕುವ ಮನಸಿನ ಚಾಳಿಯಿಂದಾಗಿ.. ಮುಂಚಿನ ಹಾಗೆ ಖುಷಿ ಆಗ್ಲಿಲ್ಲ ಅನ್ನುತ್ತೆ ಅತೃಪ್ತ ಮನಸ್ಸು. ಅದೇ ಯಾವ ನಿರೀಕ್ಷೆಯೂ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಕುಂಬ್ಳೆ, ಶ್ರೀನಾಥ್ ಬೆಂಗಳೂರಿನ ಟೈಟಾನ್ ಕಪ್ನಲ್ಲಿ ಆಡಿ ಗೆಲ್ಲಿಸಿದ್ದು ನಮಗೆ ತುಂಬಾ ಆಪ್ಯಾಯಮಾನ ಅನುಭೂತಿಯಾಗಿರುತ್ತೆ. ಯಾಕಂದ್ರೆ ಅದು ಅಚ್ಛರಿ ಹಾಗು ಅನಿರೀಕ್ಷಿತ. ಇದು ಹೀಗೆಯೇ ಇರಬಹುದು ಅಂತ ನಾನು ಪ್ರತಿಪಾದಿಸುತ್ತಿಲ್ಲ. ಬಹುಶಃ ಹೀಗೂ ಇರಬಹುದೇನೋ ಅಂತ ಹೇಳುತ್ತಿದ್ದೇನೆ ಅಷ್ಟೇ.

 

ಕಾರಣಗಳು ಏನೇ ಇದ್ದರೂ ಕೂಡಾ, ಮನಸಿನಲ್ಲಿ ತಿನ್ನುವ ಮಂಡಿಗೆ ಹೆಚ್ಚು ರುಚಿ ಅನ್ನೋದು ಸತ್ಯ. ನಿರೀಕ್ಷೆಯಲ್ಲಿರುವ ಸುಖವನ್ನು ಅನುಭವಿಸಲಾದ್ರೂ ನಿರೀಕ್ಷೆಗಳು ಬೇಕಲ್ವೇ?

 

ಕನಸಲ್ಲಿ ಬರುವ ಬೆಡಗಿಯರೇ

ನಿಜದಿ ಎದುರಾಗಬೇಡಿ

ನಿರೀಕ್ಷೆಯಲ್ಲಿರುವ ಸುಖವ

ಹುಸಿಯಾಗಿಸಬೇಡಿ .

 

ಈ ಬರಹ ನಿಮಗೆ ಖುಷಿಕೊಟ್ಟಿತಾ? ಇಲ್ಲವಾದಲ್ಲಿ ಅದಕ್ಕೆ ಕಾರಣ ನಿಮ್ಮ ಮನದಲ್ಲಿ ನಿರೀಕ್ಷೆಯ ಫಲಶ್ರುತಿಯಾಗಿ ಹುಟ್ಟಿದ ಅತೃಪ್ತಿಯೇ ಇರಬೇಕು J

 

ಟಿಪ್ಪಣಿಗಳು
  1. chetana chaitanya ಹೇಳುತ್ತಾರೆ:

    kannanatarE,
    neevu hElOdu nija.
    kelawomme teera nireekshe huttisi kayisuvavaru nijadalli sikkaaga kirikiri huttisibidtAre.
    kelavomme siguva modalE `ayyO bheti madlEbEkallappa!” andkondavru tumba ishtavagibidtare!

    nimma lekhana eradu sarti skip madi odide. nijakkU khushiyaytu.

  2. Vishal ಹೇಳುತ್ತಾರೆ:

    thumba adhbutavagi baredu nanage nirikshegintha indee kushikoduva lekhana barediddiri.
    nanna blogigu omme beti kodi.
    nanna blog : http://neelimegha.blogspot.com/

    matte siguve … naanu vish nenapirali

Leave a reply to Vishal ಪ್ರತ್ಯುತ್ತರವನ್ನು ರದ್ದುಮಾಡಿ