ಭಾವಗಳ ತೂರಿಬಿಟ್ಟೆ ಸ್ವಚ್ಛಂದವಾಗಿ
ಆಕಾಶದ ಎಲ್ಲೆ ಮೀರಿ ವಿಹರಿಸಲೆಂದು
ತೋರಿಕೆಯ ಬಿಂಕ-ಬಿಗುಮಾನಗಳ
ಹೊಸ್ತಿಲು ದಾಟಿ ಮುನ್ನುಗ್ಗಲೆಂದು
ಚೌಕಟ್ಟಿನ ಪಂಜರಗಳ ಸರಳ ಬಂಧಿಯಾಗದೆ
ಗರಿಬಿಚ್ಚಿ ಹಾರಿ ಹಾಯಾಗಿರಲೆಂದು
ಕಟ್ಟುಪಾಡುಗಳ ಕಬ್ಬಿಣದ ಕೋಟೆಯ
ಕಂದಾಚಾರಗಳ ಶೃಂಖಲೆಯಲಿ ಸಿಲುಕದಿರಲೆಂದು
ಮುಕ್ತವಾಗಿಸಿಬಿಟ್ಟೆ ಸಕಲ ಪಾಶ-ಅಂಕುಶಗಳಿಂದ
ಬರಿದೇ ಇರಿವವರ ಶೂಲಕೆ ಘಾಸಿಯಾಗದಿರಲೆಂದು
ಸ್ವಾತಂತ್ರ್ಯ ಸ್ವೇಚ್ಛೆಯಾಯಿತೋ… ಅನುಮಾನ!
ನನ್ನೇ ಸುತ್ತುವರಿದು ಕಾಡುತಿವೆಯಲ್ಲಾ…
ಗಾಯವೇ ಇಲ್ಲದೆ ನೋಯುವ ಮನಸಿಗೆ
ಯಾತನೆಯು ಮಧುರ ಎಂದ ಕವಿ ಕಲ್ಪನೆ
ನೀಡಬಲ್ಲುದೇ ಸಾಂತ್ವನ… ಹುಸಿಯಾದರೂ ರವಷ್ಟು…?