“ನೀಲ ಗಗನದೊಳು… ಮೇಘಗಳ” ಅದೆಷ್ಟನೇ ಬಾರಿ ಕೇಳಿ ಭಾವಪರವಶನಾಗಿದ್ದೇನೋ ನನಗೇ ಗೊತ್ತಿಲ್ಲ. ಕೇಳಿದಷ್ಟೂ ಮತ್ತೂ ಕೇಳಬೇಕೆಂಬ ಆಸೆ ಹುಟ್ಟಿಸುವ, ಪ್ರತಿ ಬಾರಿ ಕೇಳಿದಾಗಲೂ ಧನ್ಯತೆಯ ಭಾವವುಕ್ಕಿಸುವ ಆ ಸ್ವರದ ಗತ್ತು-ತಾಕತ್ತು, ಗಾರುಡಿಗೆ ಮರುಳಾಗಿ ತಲೆದೂಗಿದ್ದೇನೆ. ಇದು ನನ್ನೊಬ್ಬನ ಅನುಭವವಲ್ಲ. ಯಕ್ಷಗಾನದ ಕುರಿತು ಆಸಕ್ತಿಯಿರುವ ಪ್ರತಿಯೊಬ್ಬರದೂ ಇದೇ ಮಾತು. ಎಪ್ಪತ್ತರ ದಶಕದ ಉತ್ತರಾರ್ಧ ಹಾಗು ಎಂಬತ್ತರ ದಶಕದಾದ್ಯಂತ ಕರ್ನಾಟಕ ಕರಾವಳಿಯ ಮೂಲೆಮೂಲೆಯಲ್ಲೊ ಅನುರಣಿಸಿದ ಈ ಕಂಚಿನ ಕಂಠ ಯಕ್ಷಪ್ರೇಮಿಗಳ ಪಾಲಿಗೆ ಕರ್ಣರಸಾಯನವೇ ಆಗಿತ್ತು. ಹೌದು, ನಿಮ್ಮ ಊಹೆ ಸರಿ. ನಾನೀಗ ಹೇಳಹೊರಟಿರುವುದು ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವುಡರ ಕುರಿತು.
(ಚಿತ್ರ ಕೃಪೆ – ಆಗ್ನೇಯ ನಾವುಡ)
ಕರಾವಳಿ ಕರ್ನಾಟಕವು ಯಕ್ಷಗಾನದ ತವರೂರು. ಯಕ್ಷಗಾನ ಹುಟ್ಟಿ ಬೆಳೆದು ವಿಜೃಂಭಿಸಿದ-ಮೆರೆಯುತ್ತಿರುವ ಮಣ್ಣಿದು. ಯಕ್ಷಗಾನದ ಹುಟ್ಟಿನಿಂದಾರಂಭಿಸಿ ಇಂದಿನ ತನಕವೂ ಅದೆಷ್ಟೋ ಅಪ್ರತಿಮ ಕಲಾಕುಸುಮಗಳು ಅರಳುವುದನ್ನು, ಅದ್ಭುತ ಕಲಾವಿದರು ಆಗಿ ಹೋದ ವೈಭವವನ್ನು ಕಂಡು ಧನ್ಯರಾದವರು ಕರಾವಳಿಯ ಜನ. ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವುಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವುಡರು.
ನಾವುಡರು ಹುಟ್ಟಿದ್ದು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವುಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವುಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ನಾವುಡರ ಕಲಾಪ್ರೌಢಿಮೆಗೆ ಮೆರುಗನ್ನಿತ್ತರು.ತಮ್ಮ ಹದಿಹರೆಯದಲ್ಲೇ ಉಪ್ಪೂರರ ತಂಡವನ್ನು ಸೇರಿದ ನಾವುಡರು ಸರಿಸುಮಾರು 5-6 ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. 1977ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವುಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವುಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು. ತಮ್ಮ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವುಡರು ವಿರಾಜಮಾನರಾದರು.
ನಾವುಡರ ಕಂಠಸಿರಿಯನ್ನು ಕೇಳಿ ಆನಂದಿಸಲು ಕನ್ನಡ ಆಡಿಯೋ.ಕಾಂ ನಲ್ಲಿ ಕೆಲವು ಅಪರೂಪದ ಯಕ್ಷಗಾನ ಪ್ರಸಂಗಗಳಿವೆ ಕೇಳಿ..
http://www.kannadaaudio.com/Songs/Yakshagana/home/
ಭೀಷ್ಮ ವಿಜಯ, ಗದಾಯುದ್ಧ, ಚಂದ್ರಹಾಸ, ಮಾಗದ ವಧೆ, ಕೀಚಕ ವಧೆ, ಬಬ್ರುವಾಹನ, ಶನಿ ಮಹಾತ್ಮೆ, ರಾಣಿ ಶಶಿಪ್ರಭೆ.. ಹೀಗೆ ಅಸಂಖ್ಯಾತ ಪೌರಾಣಿಕ ಪ್ರಸಂಗಗಳ ಪದ್ಯಗಳು ಕಾಳಿಂಗನಾವುಡರ ಕಂಠಸಿರಿಯಲ್ಲಿ ಇನ್ನಷ್ಟು ಮೆರುಗನ್ನು ಪಡೆದುಕೊಂಡಿವೆ. ಸ್ವತಹ ನಾವುಡರೇ ಅನೇಕ ಪ್ರಸಂಗಗಳನ್ನು ಯಕ್ಷಲೋಕದ ಮಡಿಲಿಗೆ ಸಮರ್ಪಿಸಿದ್ದಾರೆ. ಅವರೇ ರಚಿಸಿದ ‘ನಾಗಶ್ರೀ’ ಪ್ರಸಂಗವಂತೂ ಹೋದೆಡೆಯಲ್ಲೆಲ್ಲ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ಅಪಾರ ಜನಮೆಚ್ಚುಗೆ ಗಳಿಸಿತ್ತು. ಈಗಲೂ ಕೂಡಾ ನಾಗಶ್ರೀ ಪ್ರಸಂಗದ ಪ್ರದರ್ಶನವಿದ್ದರೆ ಕಿಕ್ಕಿರಿವ ಪ್ರೇಕ್ಷಕ ಸಂದೋಹವೇ ಆ ಪ್ರಸಂಗದ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಹಳೆಯ ರಾಗಗಳ ಜಾಡಿನಲ್ಲಿ ಹೊಸ ಹೊಸ ಸಂಯೋಜನೆಗಳನ್ನು ಮಾಡಿದ ನಾವುಡರ ಪ್ರಯೋಗಶೀಲತೆಯಿಂದಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ಹುಟ್ಟುಹಾಕಿ ತಮ್ಮ ರಂಗದಲ್ಲಿ ಏಕಮೇವಾದ್ವಿತೀಯರೆನಿಸಿಕೊಂಡಿದ್ದರು. ನಾವುಡರು ಭಾಗವತರಾಗಿದ್ದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳ ಯಶಸ್ಸಿನ ಉತ್ತುಂಗದಲ್ಲಿ ವಿರಾಜಮಾನವಾಗಿದ್ದುದೇ ಇದಕ್ಕೆ ಸಾಕ್ಷಿ.
ವೃತ್ತಿ ಬದುಕಿನಲ್ಲಿ ಅಗ್ರಮಾನ್ಯ ಪಟ್ಟವನ್ನಲಂಕರಿಸಿ, ಸಾಂಸಾರಿಕ ಬದುಕಿನಲ್ಲಿ ಅನುರೂಪರಾದ ಪತ್ನಿ ವಿಜಯಶ್ರೀ ನಾವುಡ, ವಂಶದ ಕುಡಿ ಮಗ ಆಗ್ನೇಯ ನಾವುಡರೊಂದಿಗೆ ಸಂತೃಪ್ತರಾಗಿದ್ದರು ಕಾಳಿಂಗ ನಾವುಡರು. ಯಕ್ಷರಂಗದ ಸೇವೆಗೆ ಬದುಕನ್ನು ಮುಡಿಪು ಕಟ್ಟಿ, ಹೊಸ ಎತ್ತರವನ್ನು ಸಾಧಿಸಲು ಕಂಕಣಬದ್ಧರಾಗಿದ್ದರು. ಅವರ ಈ ಸಂತೃಪ್ತ ಬದುಕನ್ನು, ಕೀರ್ತಿಯ ಕಲಶವನ್ನು ಕಂಡು ವಿಧಿಗೇ ಕಣ್ಣುಕುಕ್ಕಿದಂತಾಯಿತೇನೋ. ಅಥವಾ ಈ ಕಂಚಿನ ಕಂಠದ ನಿನಾದಕ್ಕೆ ಜನ ಮೈಮರೆತು ತಲೆದೂಗಿ ಸುಖಿಸುವುದನ್ನು ಕಂಡು ಅಸೂಯೆಯಾಯಿತೇನೋ. ಇಲ್ಲವೇ ಈ ಯಕ್ಷಕಿನ್ನರನು ಸುರಲೋಕದಲ್ಲಿರಲು ಯೋಗ್ಯನಾದ ಅನರ್ಘ್ಯ ರತ್ನ, ನಿತ್ಯವೂ ಈ ಗಾನಾಮೃತವನ್ನು ಕೇಳಿ ಸವಿಯಬಹುದೆಂಬ ಆಸೆ ಹುಟ್ಟಿರಬೇಕು. ಅಂತೂ ವಿಧಿಯು ಈ ಗಾನಗಾರುಡಿಯ ಇಹದ ಬಾಳಿನ ಅಂತ್ಯಕ್ಕೆ ಮುನ್ನುಡಿ ಬರೆದಿತ್ತು. 1990ನೇ ಇಸವಿಯಲ್ಲಿ 32ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವುಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ ಆ ಅಪರೂಪದ ಸಾಧಕನಿಗಾಗಿ ಅಭಿಮಾನಿಗಳ ಕಣ್ಣಂಚು ತೇವವಾಗಿತ್ತು. ಕಣ್ಣಿಂದ ಮರೆಯಾದರೇನಂತೆ, ಅವರ ಕಂಠಸಿರಿಯು ಸದಾ ಕಿವಿತುಂಬಿಕೊಂಡಿರುವುದಲ್ಲ ಅನ್ನುವ ಸಮಾಧಾನವೊಂದೇ ಉಳಿದಿತ್ತು. ಅಗಲಿದ ಈ ದಿವ್ಯಚೇತನಕ್ಕೆ ರಾಜ್ಯಸರ್ಕಾರದಿಂದ ಕೂಡಾ ಗೌರವ ಸಂದಿತ್ತು. ಆಗ ಪುಟ್ಟ ಬಾಲಕನಾಗಿದ್ದ ಅವರ ಮಗ ಆಗ್ನೇಯ ನಾವುಡ ಪ್ರಶಸ್ತಿ ಫಲಕ ಸ್ವೀಕರಿಸುವಾಗ ನೆರೆದವರ ಕಣ್ಣು ಅರಿವಿಲ್ಲದಂತೆಯೇ ಒದ್ದೆಯಾಗಿತ್ತು.
ಕಾಲಚಕ್ರ ಉರುಳುತ್ತಿದೆ, ಯಕ್ಷರಂಗವೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹೊಸತನದ ಹೆಸರಲ್ಲಿ ಹೊಲಸೂ ಹುಲುಸಾಗಿ ಬೆಳೆಯುತ್ತಿದೆ. ಇದನ್ನೆಲ್ಲಾ ಕಂಡಾಗ ಒಮ್ಮೊಮ್ಮೆ ಛೆ, ನಾವುಡರಿರಬೇಕಿತ್ತು ಆಗ ಕಥೆಯೇ ಬೇರೆ ಇತ್ತು ಅಂತ ಯಕ್ಷಗಾನದ ಕುರಿತು ಕಳಕಳಿಯಿರುವ ಯಕ್ಷರಸಿಕರಿಗೆ ಅನ್ನಿಸುತ್ತದೆ. ನಾವುಡರೇ, ನಶಿಸುತ್ತಿರುವ ಭವ್ಯಪರಂಪರೆಯೊಂದರ ಉಳಿವಿಗಾಗಿಯಾದರೂ ನೀವು ಮತ್ತೊಮ್ಮೆ ಹುಟ್ಟಿಬರಬಾರದೇ ಅನ್ನುವ ಯಕ್ಷಪ್ರೇಮಿಗಳ ಮೂಕಪ್ರಶ್ನೆಯಲ್ಲೇ ನಾವುಡರಿಲ್ಲದ ಕೊರತೆ ಕಾಣುತ್ತದೆ. ನಾವುಡರು ಮರೆಯಾಗಿ ಹೋಗಿ ಎರಡು ದಶಕಗಳೇ ಉರುಳಿವೆ. ಆದರೆ ಅವರ ಅಭಿಮಾನಿಗಳ ಪಾಲಿಗೆ ಅವರ ನೆನಪೂ ಇಂದಿಗೂ ಜೀವಂತ. ಅವರ ಪದಗಳನ್ನು ಕೇಳುವಾಗ ಅದೇ ಧನ್ಯತೆಯ ಭಾವ, ಅದೇ ಭಾವಪರವಶತೆ. ದಿವ್ಯ ಚೇತನವೊಂದರ ಬದುಕು ಸಾರ್ಥಕವೆನಿಸಲು ಇಷ್ಟು ಸಾಕಲ್ಲವೇ..? ನಾವುಡರೇ ನಮ್ಮ ನೆನಪುಗಳಲ್ಲಿ ನೀವಿದ್ದೀರಿ…
(ವಿಡಿಯೋ ಕೃಪೆ – ಯು ಟ್ಯೂಬ್)