Posts Tagged ‘saaligraama’

ನೀಲ ಗಗನದೊಳು… ಮೇಘಗಳ” ಅದೆಷ್ಟನೇ ಬಾರಿ ಕೇಳಿ ಭಾವಪರವಶನಾಗಿದ್ದೇನೋ ನನಗೇ ಗೊತ್ತಿಲ್ಲ. ಕೇಳಿದಷ್ಟೂ ಮತ್ತೂ ಕೇಳಬೇಕೆಂಬ ಆಸೆ ಹುಟ್ಟಿಸುವ, ಪ್ರತಿ ಬಾರಿ ಕೇಳಿದಾಗಲೂ ಧನ್ಯತೆಯ ಭಾವವುಕ್ಕಿಸುವ ಆ ಸ್ವರದ ಗತ್ತು-ತಾಕತ್ತು, ಗಾರುಡಿಗೆ ಮರುಳಾಗಿ ತಲೆದೂಗಿದ್ದೇನೆ. ಇದು ನನ್ನೊಬ್ಬನ ಅನುಭವವಲ್ಲ. ಯಕ್ಷಗಾನದ ಕುರಿತು ಆಸಕ್ತಿಯಿರುವ ಪ್ರತಿಯೊಬ್ಬರದೂ ಇದೇ ಮಾತು. ಎಪ್ಪತ್ತರ ದಶಕದ ಉತ್ತರಾರ್ಧ ಹಾಗು ಎಂಬತ್ತರ ದಶಕದಾದ್ಯಂತ ಕರ್ನಾಟಕ ಕರಾವಳಿಯ ಮೂಲೆಮೂಲೆಯಲ್ಲೊ ಅನುರಣಿಸಿದ ಈ ಕಂಚಿನ ಕಂಠ ಯಕ್ಷಪ್ರೇಮಿಗಳ ಪಾಲಿಗೆ ಕರ್ಣರಸಾಯನವೇ ಆಗಿತ್ತು. ಹೌದು, ನಿಮ್ಮ ಊಹೆ ಸರಿ. ನಾನೀಗ ಹೇಳಹೊರಟಿರುವುದು ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವುಡರ ಕುರಿತು.

(ಚಿತ್ರ ಕೃಪೆ – ಆಗ್ನೇಯ ನಾವುಡ)

ಕರಾವಳಿ ಕರ್ನಾಟಕವು ಯಕ್ಷಗಾನದ ತವರೂರು. ಯಕ್ಷಗಾನ ಹುಟ್ಟಿ ಬೆಳೆದು ವಿಜೃಂಭಿಸಿದ-ಮೆರೆಯುತ್ತಿರುವ ಮಣ್ಣಿದು. ಯಕ್ಷಗಾನದ ಹುಟ್ಟಿನಿಂದಾರಂಭಿಸಿ ಇಂದಿನ ತನಕವೂ ಅದೆಷ್ಟೋ ಅಪ್ರತಿಮ ಕಲಾಕುಸುಮಗಳು ಅರಳುವುದನ್ನು, ಅದ್ಭುತ ಕಲಾವಿದರು ಆಗಿ ಹೋದ ವೈಭವವನ್ನು ಕಂಡು ಧನ್ಯರಾದವರು ಕರಾವಳಿಯ ಜನ. ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವುಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವುಡರು.

ನಾವುಡರು ಹುಟ್ಟಿದ್ದು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವುಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವುಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ನಾವುಡರ ಕಲಾಪ್ರೌಢಿಮೆಗೆ ಮೆರುಗನ್ನಿತ್ತರು.ತಮ್ಮ ಹದಿಹರೆಯದಲ್ಲೇ ಉಪ್ಪೂರರ ತಂಡವನ್ನು ಸೇರಿದ ನಾವುಡರು ಸರಿಸುಮಾರು 5-6 ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. 1977ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವುಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವುಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು. ತಮ್ಮ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವುಡರು ವಿರಾಜಮಾನರಾದರು.

ನಾವುಡರ ಕಂಠಸಿರಿಯನ್ನು ಕೇಳಿ ಆನಂದಿಸಲು ಕನ್ನಡ ಆಡಿಯೋ.ಕಾಂ ನಲ್ಲಿ ಕೆಲವು ಅಪರೂಪದ ಯಕ್ಷಗಾನ ಪ್ರಸಂಗಗಳಿವೆ ಕೇಳಿ..

http://www.kannadaaudio.com/Songs/Yakshagana/home/

ಭೀಷ್ಮ ವಿಜಯ, ಗದಾಯುದ್ಧ, ಚಂದ್ರಹಾಸ, ಮಾಗದ ವಧೆ, ಕೀಚಕ ವಧೆ, ಬಬ್ರುವಾಹನ, ಶನಿ ಮಹಾತ್ಮೆ, ರಾಣಿ ಶಶಿಪ್ರಭೆ.. ಹೀಗೆ ಅಸಂಖ್ಯಾತ ಪೌರಾಣಿಕ ಪ್ರಸಂಗಗಳ ಪದ್ಯಗಳು ಕಾಳಿಂಗನಾವುಡರ ಕಂಠಸಿರಿಯಲ್ಲಿ ಇನ್ನಷ್ಟು ಮೆರುಗನ್ನು ಪಡೆದುಕೊಂಡಿವೆ. ಸ್ವತಹ ನಾವುಡರೇ ಅನೇಕ ಪ್ರಸಂಗಗಳನ್ನು ಯಕ್ಷಲೋಕದ ಮಡಿಲಿಗೆ ಸಮರ್ಪಿಸಿದ್ದಾರೆ. ಅವರೇ ರಚಿಸಿದ ‘ನಾಗಶ್ರೀ’ ಪ್ರಸಂಗವಂತೂ ಹೋದೆಡೆಯಲ್ಲೆಲ್ಲ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ಅಪಾರ ಜನಮೆಚ್ಚುಗೆ ಗಳಿಸಿತ್ತು. ಈಗಲೂ ಕೂಡಾ ನಾಗಶ್ರೀ ಪ್ರಸಂಗದ ಪ್ರದರ್ಶನವಿದ್ದರೆ ಕಿಕ್ಕಿರಿವ ಪ್ರೇಕ್ಷಕ ಸಂದೋಹವೇ ಆ ಪ್ರಸಂಗದ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಹಳೆಯ ರಾಗಗಳ ಜಾಡಿನಲ್ಲಿ ಹೊಸ ಹೊಸ ಸಂಯೋಜನೆಗಳನ್ನು ಮಾಡಿದ ನಾವುಡರ ಪ್ರಯೋಗಶೀಲತೆಯಿಂದಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ಹುಟ್ಟುಹಾಕಿ ತಮ್ಮ ರಂಗದಲ್ಲಿ ಏಕಮೇವಾದ್ವಿತೀಯರೆನಿಸಿಕೊಂಡಿದ್ದರು. ನಾವುಡರು ಭಾಗವತರಾಗಿದ್ದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳ ಯಶಸ್ಸಿನ ಉತ್ತುಂಗದಲ್ಲಿ ವಿರಾಜಮಾನವಾಗಿದ್ದುದೇ ಇದಕ್ಕೆ ಸಾಕ್ಷಿ.

ವೃತ್ತಿ ಬದುಕಿನಲ್ಲಿ ಅಗ್ರಮಾನ್ಯ ಪಟ್ಟವನ್ನಲಂಕರಿಸಿ, ಸಾಂಸಾರಿಕ ಬದುಕಿನಲ್ಲಿ ಅನುರೂಪರಾದ ಪತ್ನಿ ವಿಜಯಶ್ರೀ ನಾವುಡ, ವಂಶದ ಕುಡಿ ಮಗ ಆಗ್ನೇಯ ನಾವುಡರೊಂದಿಗೆ ಸಂತೃಪ್ತರಾಗಿದ್ದರು ಕಾಳಿಂಗ ನಾವುಡರು. ಯಕ್ಷರಂಗದ ಸೇವೆಗೆ ಬದುಕನ್ನು ಮುಡಿಪು ಕಟ್ಟಿ, ಹೊಸ ಎತ್ತರವನ್ನು ಸಾಧಿಸಲು ಕಂಕಣಬದ್ಧರಾಗಿದ್ದರು. ಅವರ ಈ ಸಂತೃಪ್ತ ಬದುಕನ್ನು, ಕೀರ್ತಿಯ ಕಲಶವನ್ನು ಕಂಡು ವಿಧಿಗೇ ಕಣ್ಣುಕುಕ್ಕಿದಂತಾಯಿತೇನೋ. ಅಥವಾ ಈ ಕಂಚಿನ ಕಂಠದ ನಿನಾದಕ್ಕೆ ಜನ ಮೈಮರೆತು ತಲೆದೂಗಿ ಸುಖಿಸುವುದನ್ನು ಕಂಡು ಅಸೂಯೆಯಾಯಿತೇನೋ. ಇಲ್ಲವೇ ಈ ಯಕ್ಷಕಿನ್ನರನು ಸುರಲೋಕದಲ್ಲಿರಲು ಯೋಗ್ಯನಾದ ಅನರ್ಘ್ಯ ರತ್ನ, ನಿತ್ಯವೂ ಈ ಗಾನಾಮೃತವನ್ನು ಕೇಳಿ ಸವಿಯಬಹುದೆಂಬ ಆಸೆ ಹುಟ್ಟಿರಬೇಕು. ಅಂತೂ ವಿಧಿಯು ಈ ಗಾನಗಾರುಡಿಯ ಇಹದ ಬಾಳಿನ ಅಂತ್ಯಕ್ಕೆ ಮುನ್ನುಡಿ ಬರೆದಿತ್ತು. 1990ನೇ ಇಸವಿಯಲ್ಲಿ 32ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವುಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ ಆ ಅಪರೂಪದ ಸಾಧಕನಿಗಾಗಿ ಅಭಿಮಾನಿಗಳ ಕಣ್ಣಂಚು ತೇವವಾಗಿತ್ತು. ಕಣ್ಣಿಂದ ಮರೆಯಾದರೇನಂತೆ, ಅವರ ಕಂಠಸಿರಿಯು ಸದಾ ಕಿವಿತುಂಬಿಕೊಂಡಿರುವುದಲ್ಲ ಅನ್ನುವ ಸಮಾಧಾನವೊಂದೇ ಉಳಿದಿತ್ತು. ಅಗಲಿದ ಈ ದಿವ್ಯಚೇತನಕ್ಕೆ ರಾಜ್ಯಸರ್ಕಾರದಿಂದ ಕೂಡಾ ಗೌರವ ಸಂದಿತ್ತು. ಆಗ ಪುಟ್ಟ ಬಾಲಕನಾಗಿದ್ದ ಅವರ ಮಗ ಆಗ್ನೇಯ ನಾವುಡ ಪ್ರಶಸ್ತಿ ಫಲಕ ಸ್ವೀಕರಿಸುವಾಗ ನೆರೆದವರ ಕಣ್ಣು ಅರಿವಿಲ್ಲದಂತೆಯೇ ಒದ್ದೆಯಾಗಿತ್ತು.

ಕಾಲಚಕ್ರ ಉರುಳುತ್ತಿದೆ, ಯಕ್ಷರಂಗವೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹೊಸತನದ ಹೆಸರಲ್ಲಿ ಹೊಲಸೂ ಹುಲುಸಾಗಿ ಬೆಳೆಯುತ್ತಿದೆ. ಇದನ್ನೆಲ್ಲಾ ಕಂಡಾಗ ಒಮ್ಮೊಮ್ಮೆ ಛೆ, ನಾವುಡರಿರಬೇಕಿತ್ತು ಆಗ ಕಥೆಯೇ ಬೇರೆ ಇತ್ತು ಅಂತ ಯಕ್ಷಗಾನದ ಕುರಿತು ಕಳಕಳಿಯಿರುವ ಯಕ್ಷರಸಿಕರಿಗೆ ಅನ್ನಿಸುತ್ತದೆ. ನಾವುಡರೇ, ನಶಿಸುತ್ತಿರುವ ಭವ್ಯಪರಂಪರೆಯೊಂದರ ಉಳಿವಿಗಾಗಿಯಾದರೂ ನೀವು ಮತ್ತೊಮ್ಮೆ ಹುಟ್ಟಿಬರಬಾರದೇ ಅನ್ನುವ ಯಕ್ಷಪ್ರೇಮಿಗಳ ಮೂಕಪ್ರಶ್ನೆಯಲ್ಲೇ ನಾವುಡರಿಲ್ಲದ ಕೊರತೆ ಕಾಣುತ್ತದೆ. ನಾವುಡರು ಮರೆಯಾಗಿ ಹೋಗಿ ಎರಡು ದಶಕಗಳೇ ಉರುಳಿವೆ. ಆದರೆ ಅವರ ಅಭಿಮಾನಿಗಳ ಪಾಲಿಗೆ ಅವರ ನೆನಪೂ ಇಂದಿಗೂ ಜೀವಂತ. ಅವರ ಪದಗಳನ್ನು ಕೇಳುವಾಗ ಅದೇ ಧನ್ಯತೆಯ ಭಾವ, ಅದೇ ಭಾವಪರವಶತೆ. ದಿವ್ಯ ಚೇತನವೊಂದರ ಬದುಕು ಸಾರ್ಥಕವೆನಿಸಲು ಇಷ್ಟು ಸಾಕಲ್ಲವೇ..? ನಾವುಡರೇ ನಮ್ಮ ನೆನಪುಗಳಲ್ಲಿ ನೀವಿದ್ದೀರಿ…

(ವಿಡಿಯೋ ಕೃಪೆ – ಯು ಟ್ಯೂಬ್)

ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು ಮೈಗೂಡಿಸಿಕೊಂಡು ಯಕ್ಷಗಾನ ರಸಿಕರ ಮನರಂಜಿಸುತ್ತಿದ್ದಾರೆ. ಅವರೇ ಹೊಸಂಗಡಿಯ ರವೀಂದ್ರ ಶೆಟ್ಟಿಯವರು. ಇಂತಹ ಹಾಡಿನ ಮೋಡಿಗಾರನೊಂದಿಗೆ ಕೆಲಹೊತ್ತು ಕಳೆಯುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಅವರೊಂದಿಗೆ ನಡೆಸಿದ ಪುಟ್ಟ ಸಂವಾದದ ಬಳಿಕ ಅವರ ಸ್ವರಮಾಧುರ್ಯದಷ್ಟೇ ಶ್ರೀಮಂತವಾದ ಅವರ ಸಂಸ್ಕಾರವನ್ನು ಕಂಡು ಹಾಗೂ ವಿನಯವಂತಿಕೆಯ ಪ್ರತಿಮೂರ್ತಿಯಂತಿದ್ದ ಅವರ ಮಾತುಗಳನ್ನು ಕೇಳಿ ತುಂಬಿದ ಕೊಡ ತುಳುಕದು ಅನ್ನುವ ಮಾತಿಗೆ ಪ್ರತ್ಯಕ್ಷ ನಿದರ್ಶನ ಸಿಕ್ಕಂತಾಗಿತ್ತು. ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರ ನಿಮಗಾಗಿ-

 

ಪ್ರಶ್ನೆ ಯಕ್ಷಗಾನ ಕ್ಷೇತ್ರದತ್ತ ನೀವು ಆಕರ್ಷಿತರಾಗಿದ್ದು ಹೇಗೆ?

ರವೀಂದ್ರ ಶೆಟ್ಟಿ- ಯಕ್ಷಗಾನ ಕ್ಷೇತ್ರದಲ್ಲಿ ನನ್ನ ಅಣ್ಣ ಕರುಣಾಕರ ಶೆಟ್ಟಿಯವರು ಹೆಸರುವಾಸಿಯಾಗಿದ್ದರು. ಹಾಗಾಗಿ ತೀರಾ ಎಳೇ ಪ್ರಾಯದಲ್ಲೇ ಯಕ್ಷರಂಗವು ನನ್ನನ್ನು ಚುಂಬಕದಂತೆ ಸೆಳೆಯುತ್ತಿತ್ತು. ಕಾಳಿಂಗ ನಾವುಡರ ಹಾಡುಗಾರಿಕೆಯು ನನ್ನ ಮನಸ್ಸಿನ ಮೇಲೆ ತನ್ನ ಮಾಯಜಾಲವನ್ನು ಬೀಸಿತ್ತು. ಆಗ ಮನಸ್ಸಿನಲ್ಲಿ ಮೊಳೆತ ಭಾಗವತನಾಗುವ ಬಯಕೆ ನನ್ನನ್ನು ಈ ರಂಗದತ್ತ ಎಳೆದು ತಂದಿತು.

 

ಪ್ರಶ್ನೆ ಯಕ್ಷರಂಗದಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ? ನಿಮ್ಮ ಕಲಿಕೆ, ಗುರುಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ ಕಳೆದ 23 ವರ್ಷಗಳಿಂದ ಯಕ್ಷಗಾನ ಮಾತೆಯ ಸೇವಾಕೈಂಕರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಕಲಿಕೆ ಆರ್ಗೋಡು ಗೋವಿಂದರಾಯ ಶೆಣೈಯವರ ಸಮರ್ಥ ಮಾರ್ಗದರ್ಶನದಲ್ಲಿ ಮೊದಲ್ಗೊಂಡು, ಆ ಬಳಿಕ ಕೋಟದ ಕಲಿಕಾ ಕೇಂದ್ರದಲ್ಲಿ ಮುಂದುವರಿಯಿತು. ಕೆ.ಪಿ. ಹೆಗಡೆಯವರ ಗರಡಿಯಲ್ಲಿ ನನ್ನ ಕಲಿಕೆಗೊಂದು ಸ್ಪಷ್ಟ ರೂಪು ಬಂದಿತ್ತು. ತದನಂತರ ಹಾಲಾಡಿ ರಾಘವೇಂದ್ರ ಮಯ್ಯರ ಒಡನಾಟದಲ್ಲಿ ಅವರಿಂದ ಭಾಗವತಿಕೆಯ ಪಟ್ಟುಗಳನ್ನು ಹಂತ ಹಂತವಾಗಿ ತಿಳಿಯುತ್ತಾ ಬಂದೆ. ನಾನಿಂದು ಏನಾದರೂ ಕಿಂಚಿತ್ ಯಶಸ್ಸು ಕಂಡಿದ್ದೇನೆ ಅನ್ನುವುದಾದರೆ ಅದರ ಬಹುಪಾಲು ಶ್ರೇಯ ಮಯ್ಯರ ಸಮರ್ಥ ಮಾರ್ಗದರ್ಶನಕ್ಕೆ ಸಲ್ಲಬೇಕು.

 

ಪ್ರಶ್ನೆ ನಿಮ್ಮ ಇಲ್ಲಿಯವರೆಗಿನ ತಿರುಗಾಟದ ಕುರಿತು ಹೇಳ್ತೀರಾ?

ರ.ಶೆ ನನ್ನ 23 ವರ್ಷಗಳ ಈ ಸುದೀರ್ಘ ತಿರುಗಾಟದಲ್ಲಿ ಅನೇಕ ಮೇಳಗಳಲ್ಲಿ ಕಲಾಸೇವೆ ಗೈಯುವ ಅವಕಾಶ ನನಗೆ ಲಭಿಸಿದೆ. ಕಮಲಶಿಲೆ ಮೇಳದಲ್ಲಿ ಒಂದು ವರ್ಷ, ಮಾರಣಕಟ್ಟೆ ಮೇಳದಲ್ಲಿ ನಾಲ್ಕು ವರ್ಷ, ಶಿರಸಿ ಮೇಳದಲ್ಲಿ ಎರಡು ವರ್ಷ, ಸಾಲಿಗ್ರಾಮ ಮೇಳದಲ್ಲಿ ನಾಲ್ಕು ವರ್ಷ ಅಲ್ಲದೇ ಸ್ವ-ಆಸಕ್ತಿಯಿಂದ ತುಳು ಕಲಿತು, ತೆಂಕಿನ ಮೇಳಗಳಾದ ಪುತ್ತೂರು, ಮಂಗಳಾದೇವಿ ಹಾಗೂ ಕುಂಟಾರು ಮೇಳಗಳಲ್ಲಿ ಒಟ್ಟಾಗಿ ಆರು ವರ್ಷ ತಿರುಗಾಟ ಮಾಡಿದ್ದೇನೆ.

 

ಪ್ರಶ್ನೆ ನಿಮ್ಮ ವೃತ್ತಿಬದುಕಿನಲ್ಲಿ ತಿರುವು ನೀಡಿದ ಘಟನೆಯನ್ನು ಹಂಚಿಕೊಳ್ತೀರಾ? ಹಾಗೆಯೇ ನಿಮ್ಮ ತಿರುಗಾಟದ ಅವಧಿಯಲ್ಲಿ ಘಟಿಸಿದ ಯಾವುದಾದರೂ ಸ್ವಾರಸ್ಯಕರ-ಅವಿಸ್ಮರಣೀಯ ಘಟನೆಗಳಿದ್ರೆ ಅದನ್ನು ತಿಳಿಸುವಿರಾ?

ರ.ಶೆ ಯಕ್ಷಗಾನ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ವಾರಸ್ಯಕರ ಘಟನೆ ನಡೆಯುತ್ತಲೇ ಇರುತ್ತದೆ. ಹೇಳಹೊರಟರೆ ಅಂತಹ ಸಾವಿರಾರು ಘಟನೆಗಳಿವೆ. ಪ್ರತೀ ಪ್ರದರ್ಶನದಲ್ಲೂ ಏನಾದರೊಂದು ಸ್ವಾರಸ್ಯ, ಹೊಸ ಅನುಭವ, ವಿನೂತನವಾದುದೇನನ್ನಾದರೂ ಕಂಡು-ಕೇಳಿ ಕಲಿಯುವ ಅವಕಾಶ ಇದ್ದೇ ಇದೆ.

ನನ್ನ ವೃತ್ತಿ ಬದುಕಿಗೆ ಹೊಸ ಮೆರುಗನ್ನು ತಂದಿತ್ತಿದ್ದು ನಾನು ಸಾಲಿಗ್ರಾಮ ಮೇಳಕ್ಕೆ ಭಾಗವತನಾಗಿ ಬಂದಂತಹ ಸಂದರ್ಭ. ಇದಕ್ಕಾಗಿ ಕಿಶನ್ ಹೆಗ್ಡೆಯವರಿಗೆ ನಾನು ಸದಾ ಆಭಾರಿ. ನನ್ನನ್ನು ಒಬ್ಬ ಭಾಗವತ ಅಂತ ಜನರು ಗುರುತಿಸುವಂತಾದದ್ದು ಆಗಲೇ. ಅಪಾರ ಜನಪ್ರಿಯತೆ ತಂದುಕೊಟ್ಟ ಮೇಘ-ಮಾರ್ತಾಂಡ ಪ್ರಸಂಗ ನನ್ನ ಬದುಕಿನಲ್ಲಿ ಸದಾ ನೆನಪಲ್ಲಿ ಉಳಿಯುವಂತಹ ಪ್ರಸಂಗ. ತದನಂತರ ಬಂದ ಸಪ್ತಪದಿ ಪ್ರಸಂಗ ಕೂಡಾ ನನ್ನ ಭಾಗವತಿಕೆಯ ಹಾದಿಯಲ್ಲೊಂದು ಮೈಲಿಗಲ್ಲು. ಆ ಬೆಳಕೇ ನನ್ನ ವೃತ್ತಿ ಬದುಕಿನ ಹಾದಿಯಲ್ಲಿ ದಾರಿದೀಪದಂತಾಗಿದೆ.

 

ಪ್ರಶ್ನೆ ನೀವು ನಿಮ್ಮ ಹಾಡುಗಾರಿಕೆಗೆ ಯಾರನ್ನಾದರೂ ಸ್ಫೂರ್ತಿ-ಆದರ್ಶ ಎಂದು ನಂಬಿಕೊಂಡಿದ್ದೀರಾ? ಗುರು ಸಮಾನರೆಂದು ನೀವು ಆದರಿಸುವ ವ್ಯಕ್ತಿ ಯಾರು?

ರ.ಶೆ – ನನಗೆ ಗುಂಡ್ಮಿ ಕಾಳಿಂಗ ನಾವುಡರೇ ಸದಾ ಸ್ಫೂರ್ತಿಯ ಸೆಲೆ. ಅವರ ಸ್ವರಕ್ಕಿದ್ದ ಗತ್ತು-ಗಾಂಭೀರ್ಯ, ಲಯ, ಗಡಸುತನ, ಮಾಧುರ್ಯ ಇವೆಲ್ಲವುಗಳಿಂದಾಗಿ ಸದಾ ನನಗೆ ಆದರ್ಶಪ್ರಾಯರಾಗಿದ್ದರು. ನನ್ನದೇನಿದ್ದರೂ ಅವರು ರಚಿಸಿಟ್ಟುಹೋದ ಸಮರ್ಥ ಪರಂಪರೆಯ ಹೆಜ್ಜೆಜಾಡಿನಲ್ಲಿ ಕಿಂಚಿತ್ತು ದೂರವನ್ನಾದರೂ ಕ್ರಮಿಸಬೇಕೆನ್ನುವ ನಮ್ರ ಪ್ರಯತ್ನ.

 

ನನ್ನ ಗುರುವೆಂಬ ಅಭಿದಾನಕ್ಕೆ ಪಾತ್ರರಾಗುವಂತವರು ಯಾರಾದರೂ ಇದ್ದರೆ ಅದು ಹಾಲಾಡಿ ರಾಘವೇಂದ್ರ ಮಯ್ಯರು. ಅವರ ಸಹಕಾರ, ಮಾರ್ಗದರ್ಶನವನ್ನು ನಾನು ಎಷ್ಟು ನೆನೆದರೂ ಅದು ಕಡಿಮೆಯೇ ಸರಿ. ಅವರ ಒಡನಾಟದಲ್ಲಿ ನನ್ನ ವೃತ್ತಿ ಬದುಕಿಗೆ ಹೊಸ ಭಾಷ್ಯ ಬರೆಯಲ್ಪಟ್ಟಿತು ಅಂತ ಹೇಳಿದರೂ ಅದು ಅತಿಶಯೋಕ್ತಿಯಲ್ಲ.

 

ಪ್ರಶ್ನೆ ಹೊಸ ಪ್ರಸಂಗಗಳು ಹಾಗೂ ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯ ತುಲನೆಯಲ್ಲಿ ನೀವು ಮೆಚ್ಚುವುದು ಯಾವುದು?

ರ.ಶೆ – ಸತ್ಯ ಹೇಳಬೇಕೆಂದರೆ ಯಾವತ್ತಿಗೂ ಪೌರಾಣಿಕ ಪ್ರಸಂಗಗಳೇ ನನ್ನ ಮೊದಲ ಆದ್ಯತೆ. ಪೌರಾಣಿಕ ಪ್ರಸಂಗಗಳಿಗಿರುವ ಪಾರಂಪರಿಕ ಚೌಕಟ್ಟಿನ ಸೊಗಸು ಹೊಸಪ್ರಸಂಗಗಳಲ್ಲಿ ತೀರಾ ದುರ್ಲಭ. ಹಾಗಾಗಿಯೇ ಎಲ್ಲಾ ರಸ-ಭಾವಗಳ ಪೋಷಣೆಯಿರುವ ಪೌರಾಣಿಕ ಪ್ರಸಂಗಗಳಲ್ಲಿ ಹಾಡುವುದು ಅತ್ಯಂತ ತೃಪ್ತಿ ನೀಡುತ್ತದೆ. ಹಾಗಂತ ಹೊಸ ಪ್ರಸಂಗಗಳಿಗೆ ಹಾಡುವುದು ಕಳಪೆಯೆಂದೇನರ್ಥವಲ್ಲ. ಅದಕ್ಕೂ ಅದರದ್ದೇ ಆದ ಸೊಬಗಿದ್ದೇ ಇರುತ್ತದೆ. ಆದರೆ ಇವೆರಡರ ತುಲನೆಯಲ್ಲಿ ನನ್ನ ಪ್ರಾಶಸ್ತ್ಯ ಮಾತ್ರ ಪೌರಾಣಿಕ ಪ್ರಸಂಗಗಳಿಗೇ.

 

ಪ್ರಶ್ನೆ ಇತ್ತೀಚೆಗೆ ರಂಜನೆಯ ಹೆಸರಿನಲ್ಲಿ ವಿವಿಧ ಜನಾಕರ್ಷಣೆಯ ತಂತ್ರಗಳೊಂದಿಗೆ ಬರುತ್ತಿರುವ ಹೊಸ ಪ್ರಸಂಗಗಳು ಹೆಚ್ಚುತ್ತಿವೆಯಲ್ಲ. ಈ ಬಗ್ಗೆ ನಿಮ್ಮ ನಿಲುವೇನು?

ರ.ಶೆ ಬದಲಾವಣೆ, ಹೊಸತನ ಎಲ್ಲಾ ರಂಗಗಳಲ್ಲಿ ಸಹಜ ಹಾಗೂ ಅನಿವಾರ್ಯ ಕೂಡಾ. ಕಲೆ ಯಾವತ್ತಿಗೂ ನಿಂತ ನೀರಾಗಬಾರದು. ಅದರೆ ಎಲ್ಲವೂ ಹಿತಮಿತವಾಗಿದ್ದರೆ ಮಾತ್ರ ಅದಕ್ಕೊಂದು ಚಂದ-ಘನತೆ. ಪ್ರೇಕ್ಷಕರ ಬದಲಾಗುವ ಅಭಿರುಚಿಗೆ ತಕ್ಕಂತೆ ಒಂದಿಷ್ಟು ರಂಜನೆಗಾಗಿ ಯಕ್ಷಗಾನದ ಪಾರಂಪರಿಕ ಚೌಕಟ್ಟಿಗೆ, ರೀತಿ-ನೀತಿಗೆ ಅಪಚಾರವಾಗದಂತೆ ಆಕರ್ಷಣೆಯ ತಂತ್ರಗಳುಗಳು ಇದ್ದರೆ ಅದು ಪ್ರಸಂಗದ ಯಶಸ್ಸಿಗೆ ಪೂರಕವಾಗುತ್ತದೆ. ಕಾಲಕಾಲಕ್ಕೆ ಹೊಸತನವನ್ನು ಮೈಗೂಡಿಸಿಕೊಳ್ಳದಿದ್ದರೆ ಕಲೆ ನಿಂತ ನೀರಂತಾಗಿಬಿಡುವ ಅಪಾಯವಿದೆ. ಅಲ್ಲದೇ ಯಾವುದೇ ಕಲಾಪ್ರಕಾರ ಉಳಿಯಬೇಕಿದ್ದರೆ ಅದಕ್ಕೆ ಜನಾಕರ್ಷಣೆ, ಬೆಂಬಲ ತೀರಾ ಅವಶ್ಯ. ಹಾಗಾಗಿ ಈ ಬದಲಾವಣೆಗಳೆಲ್ಲವೂ ಕಲೆಕ್ಷನ್ ನಂಬಿಕೊಂಡು ಬದುಕುವ ವೃತ್ತಿ ಮೇಳಗಳ ಉಳಿವಿಗೆ ಅನಿವಾರ್ಯ ಕೂಡಾ. ಆದರೆ ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಬರೀ ಅಗ್ಗದ ತಂತ್ರಗಳನ್ನೇ ತುಂಬಿಸಿಟ್ಟರೆ ಅದು ಕಲೆಗೆ ಮಾಡುವ ಅಪಚಾರ. ಉಪ್ಪಿನಕಾಯಿ ಊಟದ ಒಂದು ಭಾಗವಾಗಿದ್ದರೆ ಊಟ ರುಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನೇ ಊಟ ಅಂತ ಕರೆಯಲಾಗದಷ್ಟೇ. ಹಾಗಾಗಿ ಎಲ್ಲವೂ ಹಿತಮಿತವಾಗಿದ್ದರೆ ಸಹ್ಯ. ಆ ಅರಿವು ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಇರಬೇಕಾದುದು ತೀರಾ ಅಗತ್ಯ.

 

ಪ್ರಶ್ನೆ ನೀವು ರಚಿಸಿರುವ ಪ್ರಸಂಗಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ – ಹಿಂದೆ ಬಯಲಾಟದ ಮೇಳಗಳಲ್ಲಿದ್ದಾಗ ಅನೇಕ ಪ್ರಸಂಗಗಳನ್ನು ರಚಿಸಿದ್ದೇನೆ. ದೈವಲೀಲೆ, ಸ್ವಪ್ನದ ಸಿರಿ, ಸ್ವಪ್ನ ಕನ್ಯೆ..ಇನ್ನೂ ಮುಂತಾದುವುಗಳು. ವೃತ್ತಿ ಮೇಳಕ್ಕೆ ಬಂದ ಮೇಲೆ ನಾನು ರಚಿಸಿದ ಮೊಟ್ಟ ಮೊದಲ ಕೃತಿ ಸ್ವಪ್ನ ಸಾಮ್ರಾಟ. ಎಲ್ಲಿಂದಲೋ ಸ್ಫೂರ್ತಿ ಪಡೆದು ಪ್ರಸಂಗವನ್ನು ರಚಿಸುವುದು ತಪ್ಪೋ ಸರಿಯೋ, ಆದರೆ ನನಗೆ ಮಾತ್ರ ಹಾಗೆ ಮಾಡಬೇಕೆನ್ನಿಸಲಿಲ್ಲ. ಸ್ವಂತ ಕಲ್ಪನೆಯಿಂದಲೇ ನನ್ನ ಅನುಭವದ ಸಾರವನ್ನೆಲ್ಲ ಕ್ರೊಢೀಕರಿಸಿ ಅದನ್ನೊಂದು ಸವಾಲೆಂಬಂತೆ ಸ್ವೀಕರಿಸಿ ರಚಿಸಿದ ಕೃತಿಯೇ ಈ ಸ್ವಪ್ನ ಸಾಮ್ರಾಟ. ಇದರಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸಲು ಅನೇಕ ರಂಜನೀಯ ಅಂಶಗಳು ಸೇರಿವೆಯಾದರೂ, ಗಟ್ಟಿ ಕಥೆಯೊಂದರ ಹಿನ್ನೆಲೆಯಿದೆ. ಮೊನ್ನೆ ಬೆಂಗಳೂರಿನಲ್ಲಿ ಕಿಕ್ಕಿರಿದ ಸಭಾಂಗಣದಲ್ಲಿ ಪ್ರದರ್ಶಿತವಾಗಿ ಎಲ್ಲರ ಮೆಚ್ಚುಗೆಗೂ ಪಾತ್ರವಾಯ್ತು. ಮುಂದಿನ ತಿರುಗಾಟದ ಅವಧಿಯಲ್ಲಿ ಇದು ಜನಮನ ಗೆಲ್ಲಲಿದೆ ಎನ್ನುವ ವಿಶ್ವಾಸ ಕೂಡಾ ಇದೆ.

 

ಪ್ರಶ್ನೆ ಪ್ರಸ್ತುತ ವರ್ಷದಿಂದ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ನಿಮ್ಮ ತಿರುಗಾಟ ಶುರುವಾಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆ, ನಿರೀಕ್ಷೆ ಏನಾದ್ರೂ ಇದೆಯೇ? ಪೆರ್ಡೂರು ಮೇಳವನ್ನು ಆರಿಸಲು ಕಾರಣವೇನು?

ರ.ಶೆ ಮೊಟ್ಟ ಮೊದಲನೆಯದಾಗಿ ಹೆಸರಾಂತ ವೃತ್ತಿಮೇಳವಾದ ಪೆರ್ಡೂರಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು ನನಗೆ ಬಹಳ ಖುಶಿ ತಂದು ಕೊಟ್ಟ ಸಂಗತಿ. ಅದೂ ಅಲ್ಲದೇ ಕರಾವಳಿಯ ಗಾನಕೋಗಿಲೆ ಎಂದೇ ಹೆಸರಾಗಿರುವ ಧಾರೇಶ್ವರರಂತಹ ಮೇರು ಸದೃಶ ಪ್ರತಿಭೆಯ ಜೊತೆ ಕೆಲಸ ಮಾಡುವ ಸೌಭಾಗ್ಯ. ಇದಕ್ಕಿಂತ ಉತ್ತಮ ಅವಕಾಶ ಸಿಕ್ಕೀತೇ? ಧಾರೇಶ್ವರರ ಸಲಹೆ, ಸಮರ್ಥ ಮಾರ್ಗದರ್ಶನದಲ್ಲಿ ನನ್ನ ಕಲಿಕೆ-ಸಾಧನೆಗಳ ಹಾದಿ ಇನ್ನಷ್ಟು ಸಲೀಸಾಗಲಿದೆ. ನನ್ನ ಹಾಡುಗಾರಿಕೆಯಲ್ಲಿ ಲೋಪ-ದೋಷಗಳು ಕಂಡು ಬಂದಾಗ ಅದನ್ನು ತಿದ್ದಿ ಸರಿಪಡಿಸಲು ಸೂಕ್ತ ಸಲಹೆ ನೀಡುವ ಅವರ ಒಡನಾಟ ನಿಜಕ್ಕೂ ನನ್ನ ಪಾಲಿಗೆ ಸುವರ್ಣಾವಕಾಶ. ಜೊತೆಗೆ ತೀರ್ಥಳ್ಳಿ, ಆರ್ಗೋಡು, ಥಂಡಿಮನೆ ಇಂತಹ ಮಹಾನ್ ಕಲಾವಿದರಿಗೆ ಪದ್ಯ ಹೇಳುವ ಸದವಕಾಶ. ಹಾಗಾಗಿ ಇದು ನನ್ನ ವೃತ್ತಿ ಬದುಕಿನ ಇನ್ನೊಂದು ಮಹತ್ತರ ತಿರುವಾಗಲಿದೆ ಅನ್ನುವ ನಿರೀಕ್ಷೆ, ನಂಬಿಕೆ ನನ್ನದು.

 

ಪ್ರಶ್ನೆ ನಿಮ್ಮ ಕಂಠಸಿರಿ, ನಿಮ್ಮ ಹಾಡುಗಾರಿಕೆಯ ಶೈಲಿ ನಾವುಡರ ಭಾಗವತಿಕೆಯನ್ನು ನೆನಪಿಸುತ್ತದೆ ಅನ್ನುವ ಮಾತು ಕೇಳಿ ಬರುತ್ತಿದೆಯಲ್ಲ?

ರ.ಶೆ ಅದೆಲ್ಲ ಯಕ್ಷಗಾನ ಕಲಾಭಿಮಾನಿಗಳ ಅಭಿಮಾನದ ಮಾತು ಅಷ್ಟೇ. ಅವರಿಂದ ಸ್ಫೂರ್ತಿ ಪಡೆದ ನನ್ನ ಶೈಲಿ, ಧ್ವನಿ ನಾವುಡರನ್ನು ಹೋಲುತ್ತದೆ ಅಂದ ಮಾತ್ರಕ್ಕೇ ಆ ಯೋಗ್ಯತೆ ನನಗೆ ಬರಲಾರದು ಬಿಡಿ. ನನ್ನ ವೃತ್ತಿ ಬದುಕಿನ ಕೊನೆಯೊಳಗೆ ನಾವುಡರ, ಧಾರೇಶ್ವರರ ಯೋಗ್ಯತೆಯಲ್ಲಿ ಹತ್ತರಲ್ಲೊಂದು ಭಾಗದಷ್ಟು ಸಾಧಿಸಲು ನಾನು ಶಕ್ಯನಾದರೆ ನಾನು ಧನ್ಯ. ಹಾಗಾದಲ್ಲಿ ಅದರ ಶ್ರೇಯವೆಲ್ಲಾ ಭಗವಂತನ ದಯೆ, ಯಕ್ಷಗಾನ ಪ್ರೇಮಿಗಳ ಪ್ರೀತ್ಯಾದರದ ಹರಕೆಯ ಫಲ ಹಾಗೂ ಗುರುಸದೃಶರಾದ ಮಯ್ಯ, ಧಾರೇಶ್ವರ್‌ರಂತವರ ಕೃಪಾಶೀರ್ವಾದಕ್ಕೇ ಸಲ್ಲಬೇಕು.

ಪ್ರಶ್ನೆ ಮಾತುಕತೆ ಮುಗಿಸುವ ಮುನ್ನ ಒಂದೇ ಒಂದು ಪ್ರಶ್ನೆ. ಯಕ್ಷಗಾನವೆಂದರೆ ನವರಸ-ಭಾವಗಳ ಅಮೃತಧಾರೆ. ಎಲ್ಲಾ ಭಾವ-ರಸಗಳ ಹಾಡುಗಳೂ ಸಮ್ಮಿಳಿತವಾಗಿರುವ ರಸಾಯನ. ಇದರಲ್ಲಿ ನಿಮ್ಮ ಮೆಚ್ಚಿನ ರಸ/ಭಾವ ಯಾವುದು?

ರ.ಶೆ ಎಲ್ಲಾ ರಸಗಳಿಗೂ ಅದರದ್ದೇ ಆದ ಸೊಗಸಿದೆ. ಆದರೆ ಅದರಲ್ಲಿ ನನಗಿಷ್ಟವಾಗಿದ್ದು ಕರುಣಾರಸ. ಈ ರಸದ ಹಾಡುಗಳಲ್ಲಿ ಸ್ವರದ ಏರಿಳಿತಗಳಲ್ಲೇ ಭಾವಸ್ಫುರಣಕ್ಕೆ ಅವಕಾಶ ಹೆಚ್ಚು. ಹಾಗಾಗಿ ಅದು ನನ್ನ ಅಚ್ಚುಮೆಚ್ಚು.

 

ಸಾಧಕನಾದವನಿಗೆ ಪ್ರತಿದಿನ, ಪ್ರತಿ ಸಂದರ್ಭಗಳೂ ಹೊಸ ಕಲಿಕೆಗೆ ತೆರೆದ ಮುಕ್ತದ್ವಾರಗಳು. ಸದಾ ಹೊಸತನ್ನು ಕಲಿಯುವ ತುಡಿತದ ಜೊತೆಗೆ ತನ್ನ ಪ್ರತಿಭೆಯ ಬಗ್ಗೆ ಗರ್ವವಿಲ್ಲದ ವಿನಯವಂತಿಕೆಯೇ ಮಹಾನ ಸಾಧಕನ ದ್ಯೋತಕ. ಗಿರಿ-ಬೆಟ್ಟದಷ್ಟು ಸಾಧನೆ ಮಾಡಿದರೂ ತಾನು ಸಾಧಿಸಿದ್ದು ಕಿರುಬೆಟ್ಟಿನಷ್ಟು ಅನ್ನುವ ವಿನಯದ ಜೊತೆಗೆ, ತಾನು ಸಾಗಿ ಬಂದ ಹಾದಿಯನ್ನು ಮರೆತಿಲ್ಲ ರವೀಂದ್ರ ಶೆಟ್ಟಿಯವರು. ತನ್ನ ಸಾಧನೆಗೆ ಇಂಬಾದವರನ್ನೆಲ್ಲ ಸ್ಮರಿಸುವ ಕೃತಜ್ಞತೆಯಿರುವ ಇವರು ಇನ್ನಷ್ಟು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಧಾರೇಶ್ವರರಂತಹ ದಿಗ್ಗಜರ ಸಹವಾಸದಲ್ಲಿ ರವೀಂದ್ರ ಶೆಟ್ಟರ ಪ್ರತಿಭೆ ಪುಟವಿಟ್ಟ ಬಂಗಾರವಾಗಲಿ ಅನ್ನುವುದು ಯಕ್ಷಾಭಿಮಾನಿಗಳ ಹಾರೈಕೆ ಮಾತ್ರವಲ್ಲ ಆಶಯವೂ ಕೂಡಾ. ಸಾಧನೆಯ ಮೇರುಶಿಖರವನ್ನೇರಿ ಈ ಪ್ರತಿಭೆಯು ಕಲಾಸೌರಭವನ್ನು ಎಲ್ಲೆಡೆಗೂ ಪಸರಿಸಲಿ ಎನ್ನುವ ಹಾರೈಕೆಗಳೊಂದಿಗೆ ರವೀಂದ್ರ ಶೆಟ್ಟಿ ಹೊಸಂಗಡಿಯವರೊಂದಿಗಿನ ಈ ಪುಟ್ಟ ಸಂವಾದಕ್ಕೆ ತೆರೆಯೆಳೆಯುತ್ತೇನೆ.

 

ಯಕ್ಷಗಾನಂ ಗೆಲ್ಗೆ